ಲಖನೌ: ಸ್ವದೇಶಿ ಗೋ ತಳಿಗಳ ಮೇಲಿನ ಸಂಶೋಧನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಕಾಮಧೇನು ಪೀಠ ಸ್ಥಾಪಿಸುವಂತೆ ಉತ್ತರ ಪ್ರದೇಶ ಗೋ ಸೇವಾ ಆಯೋಗ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಮನವಿ ಮಾಡಿದೆ.
ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಸಂಗೀತಾ ಶ್ರೀವಾಸ್ತವ ಇತ್ತೀಚಿಗೆ ಗೋ ಪೀಠ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದರು. ಇದರಿಂದ ಪ್ರೇರಿತರಾಗಿರುವ ಗೋ ಆಯೋಗ ಇದೀಗ, ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಗೋ ಪೀಠ ಸ್ಥಾಪಿಸಬೇಕೆಂದು ಕೋರಿದೆ.
ಕೃಷಿ ಹಿನ್ನೆಲೆ ಮತ್ತು ರಾಜ್ಯದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಹಸು ತಳಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇದು ಬಹಳ ಅನುಕೂಲವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಗೋ ಸೇವಾ ಆಯೋಗದ ಹೆಚ್ಚುವರಿ ಸಾಂಖ್ಯಿಕ ಅಧಿಕಾರಿ ಅಮಿತ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಶ್ಯಾಮ್ ನಂದನ್ ಸಿಂಗ್, ಗೋ ಆಯೋಗದ ಮುಖ್ಯಸ್ಥರಾಗಿದ್ದಾರೆ.
ಕ್ಯಾಂಪಸ್ ನಲ್ಲಿ ಕಾಮಧೇನು ಪೀಠ ಸ್ಥಾಪಿಸುವ ಪ್ರಸ್ತಾವವನ್ನು ಅನುಮೋದನೆಗಾಗಿ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಅಲಹಾಬಾದ್ ವಿಶ್ವವಿದ್ಯಾಲಯ ಕಳುಹಿಸಿದೆ. ಸ್ಥಳೀಯ ಹಸುಗಳಿಗೆ ಸಂಬಂಧಿಸಿದ ವಿಜ್ಞಾನ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಸಂಶೋಧನೆ ಮತ್ತು ತರಬೇತಿಗಾಗಿ ಒಂದು ವೇದಿಕೆಯ ಅಗತ್ಯವಿದೆ ಎಂದು ಗೋ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಸಾದ ಗೋ ರಕ್ಷಣೆಗಾಗಿ ಪ್ರಯತ್ನ ನಡೆಸಲಾಗುತ್ತಿದೆ. ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಗೋವುಗಳಿಗೆ ಮೇವು ಮತ್ತು ಔಷಧಿಯನ್ನು ರಿಯಾಯಿತಿ ದರದಲ್ಲಿ ಪೂರೈಸಲಿದ್ದಾರೆ. ಇದಲ್ಲದೇ, ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರವನ್ನು ನಿರ್ಧರಿಸಲಾಗುವುದು ಎಂದು ಆಯೋಗದ ಮೂಲಗಳು ಹೇಳಿವೆ.
Advertisement