ದೇಶ
'ನಿರ್ಭಯಾ' ಪ್ರಕರಣ: ಅಪರಾಧಿ ವಿನಯ್ ಶರ್ಮ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಕೋವಿಂದ್
2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ತಿರಸ್ಕರಿಸಿದ್ದಾರೆ.
ನವದೆಹಲಿ: 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ತಿರಸ್ಕರಿಸಿದ್ದಾರೆ.
ಗಲ್ಲು ಶಿಕ್ಷೆಯಿಂದ ಪಾರಾಗಲು ತನ್ನ ಮನವಿಯನ್ನು ಆಲಿಸುವಂತೆ ಕಳೆದ ಬುಧವಾರ ವಿನಯ್ ಶರ್ಮ ಪರ ವಕೀಲ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ವಿನಯ್ ಶರ್ಮ ಪರ ವಕೀಲ ಎ ಪಿ ಸಿಂಗ್, ಜೈಲಿನಲ್ಲಿ ವಿನಯ್ ಶರ್ಮ ವಿಚಾರಣೆ ವೇಳೆಯೇ ಆತನಿಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ಹೀಗಾಗಿ ಗಲ್ಲು ಶಿಕ್ಷೆಯಿಂದಲಾದರೂ ಪಾರು ಮಾಡಬೇಕು ಎಂದಿದ್ದರು.
ಸುಪ್ರೀಂ ಕೋರ್ಟ್ ಈಗಾಗಲೇ ವಿನಯ್ ಶರ್ಮ ಅವರ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿದೆ.
ನಿನ್ನೆ ದೆಹಲಿ ಕೋರ್ಟ್ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ವಿನಯ್ ಶರ್ಮ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ಮುಕೇಶ್ ಸಿಂಗ್ ಅವರ ಗಲ್ಲುಶಿಕ್ಷೆ ದಿನಾಂಕವನ್ನು ಮುಂದೂಡಿದೆ. ಇಲ್ಲದಿದ್ದರೆ ಇಂದು ಬೆಳಗ್ಗೆ ನಾಲ್ವರಿಗೂ ಗಲ್ಲುಶಿಕ್ಷೆಯಾಗಬೇಕಿತ್ತು.