ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೊರೆಯುವ ಚಳಿಯ ನಡುವೆಯೂ ತಾಯಿಯೊಂದಿಗೆ ತಲೆಗೆ ತ್ರಿವಣ ಧ್ವಜ ಹೊದ್ದು ಕುಳಿತುಕೊಳ್ಳುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಮೊಹಮ್ಮದ್ ಜಹಾನ್ ಮೃತಪಟ್ಟಿದೆ
ತೀವ್ರ ಚಳಿ ಹಾಗೂ ಶೀತದಿಂದಾಗಿ ಈ ಮಗು ಮೃತಪಟ್ಟಿದ್ದರೂ, ದೃಢ ನಿರ್ಧಾರದೊಂದಿಗೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಆ ಮಗುವಿನ ತಾಯಿ, ಇದು ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಎನ್ನುತ್ತಾರೆ.
ಆ ಶಿಶುವಿನ ಪೋಷಕರಾದ ಮೊಹಮ್ಮದ್ ಆರಿಫ್ ಮತ್ತು ನಾಜಿಯಾ, ಬಟ್ಲಾ ಹೌಸ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಶೀಟ್ ಮತ್ತು ಬಟ್ಟೆಯೊಂದಿಗೆ ಒಂದು ಸಣ್ಣ ಗುಡಿಸಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ
ಇವರು ಉತ್ತರ ಪ್ರದೇಶದ ಬರೇಲಿಯಿಂದ ಬಂದಿದ್ದು, ಅರಿಫ್ ಎಂಬ್ರಾಯಿಡರ್ ಕೆಲಸದ ಜೊತೆಗೆ ಇ- ರಿಕ್ಷಾ ಓಡಿಸುತ್ತಾರೆ. ಆತನ ಹೆಂಡತಿ ಎಂಬ್ರಾಯಿಡರ್ ಕೆಲಸಕ್ಕೆ ನೆರವು ನೀಡುತ್ತಾರೆ.
ಕಸೂತಿ ಕೆಲಸದ ಜೊತೆಗೆ ಇ- ರಿಕ್ಷಾವನ್ನು ಓಡಿಸಿದರೂ ಕಳೆದ ತಿಂಗಳು ನಾನು ಸಾಕಷ್ಟು ಸಂಪಾದಿಸಲು ಸಾಧ್ಯವಾಗಲಿಲ್ಲ. ಈಗ ನಮ್ಮ ಮಗುವಿನ ಸಾವಿನೊಂದಿಗೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಹಸುಗೂಸು ಧರಿಸುತ್ತಿದ್ದ ಐ ಲವ್ ಮೈ ಇಂಡಿಯಾ ಎಂದು ಬರೆದಿದ್ದ ಉಣ್ಣೆಯ ಕ್ಯಾಪ್ ತೋರಿಸಿ ಅರಿಫ್ ಕಣ್ಣೀರಿಡುತ್ತಾರೆ.
ಪ್ರತಿಭಟನೆಯಿಂದ ಮರಳಿದ ನಂತರ ಜನವರಿ 30ರಂದು ರಾತ್ರಿ ನಿದ್ರೆಯಲ್ಲಿರುವಾಗಲೇ ಜಹಾನ್ ನಿಧನ ಹೊಂದಿದ್ದಾಗಿ ನಾಜಿಯಾ ದು:ಖಿತರಾದರು. ನಾಜಿಯಾ ಡಿಸೆಂಬರ್ 18ರಿಂದಲೂ ಪ್ರತಿದಿನವೂ ಜಹಾನ್ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
ಸಿಎಎ ಹಾಗೂ ಎನ್ ಆರ್ ಸಿ ಎಲ್ಲಾ ಸಮುದಾಯಗಳ ವಿರೋಧಿಯಾಗಿದ್ದು, ಶಾಹೀನ್ ಭಾಗ್ ಪ್ರತಿಭಟನೆಯಲ್ಲಿ ಮತ್ತೆ ಪಾಲ್ಗೊಂಡಿರುವುದಾಗಿ ಹೇಳುವ ನಾಜಿಯಾ, ದೇಶದಲ್ಲಿನ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಧರ್ಮದ ಆಧಾರದ ಮೇಲೆ ವಿಭಜಿಸುವ ಸಿಎಎಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಆದರೆ, ನಮ್ಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಈ ಕಾಯ್ದೆ ಏಕೆ ಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಮಗುವಿನ ಸಾವಿಗೆ ಸಿಎಎ ಹಾಗೂ ಎನ್ ಆರ್ ಸಿಯೇ ಕಾರಣ ಎಂದು ಅರೀಫ್ ದೂಷಿಸಿದರು.
Advertisement