ದೇಶಾದ್ಯಂತ ಎನ್​ಆರ್​ಸಿ ಜಾರಿ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ: ಲೋಕಸಭೆಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ಜಾರಿಗೊಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರ ನೀಡಿದೆ.
ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ
ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ

ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ಜಾರಿಗೊಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರ ನೀಡಿದೆ.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ರೀತಿ ಎನ್​ಆರ್​ಸಿಯನ್ನೂ ದೇಶಾದ್ಯಂತ ಜಾರಿಗೊಳಿಸುವ ಬಗ್ಗೆ ಯಾವುದಾದರು ಯೋಜನೆ ಹೊಂದಿದೆಯೇ ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ಈ ಕ್ಷಣದವರೆಗೆ ಸರ್ಕಾರ ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶಾದ್ಯಂತ ಎನ್ ಆರ್ ಸಿ ಜಾರಿ ಕುರಿತ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಹೇಗೆ ಜನರ ಮೇಲೆ ಹೆಚ್ಚುವರಿ ಭಾರ ಹೊರಿಸಲು ಸಾಧ್ಯ ಎಂದು ರೈ ಪ್ರಶ್ನಿಸಿದ್ದಾರೆ.

ಸೋಮವಾರದಿಂದ ಬಜೆಟ್​ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲಿ ರಾಜ್ಯಸಭೆ ಹಾಗೂ ಲೋಕಸಭೆ ಎರಡರಲ್ಲೂ ಪ್ರತಿಪಕ್ಷಗಳು ಹೆಚ್ಚಾಗಿ ​ಸಿಎಎ ಹಾಗೂ ಎನ್ ಆರ್ ಸಿ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿಗಳು ಮುನ್ನೆಲೆಗೆ ಬಂದಾಗಿನಿಂದಲೂ ರಾಷ್ಟ್ರದ ಬಹುತೇಕ ಜನರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ.

ಎನ್​ಪಿಆರ್​ನ್ನು ಹಿಂದೆಯೂ ಮಾಡಲಾಗಿತ್ತು. ಆದರೆ ಆಗ ಅದರಲ್ಲಿದ್ದ ಪ್ರಶ್ನೆಗಳು ತೀರ ಸರಳವಾಗಿದ್ದವು. ಆದರೆ ಈಗಿನ ಕೇಂದ್ರ ಸರ್ಕಾರದ ಎನ್​ಪಿಆರ್​ನಲ್ಲಿ ತಂದೆಯ ಹುಟ್ಟಿದ ದಿನಾಂಕದಂತಹ ಕ್ಲಿಷ್ಟ ಪ್ರಶ್ನೆಗಳನ್ನು ಇಡಲಾಗಿದೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ, ಕಾಂಗ್ರೆಸ್​ನ ಗುಲಾಬ್​ ನಭಿ ಆಜಾದ್​ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com