ನವದೆಹಲಿ: ನಿರ್ಭಯಾ ಆತ್ಯಾಚಾರಿಗಳಿಗೆ ಹೊಸದಾಗಿ ಡೆತ್ ವಾರಂಟ್ ಜಾರಿ ಮಾಡುವಂತೆ ಜಾರಿ ಮಾಡುವಂತೆ ಕೋರಿ ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ವಜಾಗೊಳಿಸಿದೆ.
ಫೆಬ್ರವರಿ 5ರಂದು ನ್ಯಾಯಾಲಯವೇ ಅಪರಾಧಿಗಳಿಗೆ ಕಾನೂನು ಪ್ರಕ್ರಿಯೆ ಪೂರ್ಣ ಮಾಡಲು ಅವಕಾಶ ನೀಡಿರುವಾಗ ಅವರನ್ನು ಗಲ್ಲಿಗೇರಿಸಲು ಅವಕಾಶ ಕೋರುವುದು ತಪ್ಪು. ಒಂದು ವಾರದೊಳಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಅಪರಾಧಿಗಳಿಗೆ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿಂದೆ ನಿರ್ಭಯಾ ಆತ್ಯಾಚಾರಿಗಳನ್ನು ಗಲ್ಲಿಗೇರಿಸಲು ಹೊಸದಾಗಿ ದಿನಾಂಕ ನಿಗದಿ ಮಾಡುವಂತೆ ಕೋರಿ ತಿಹಾರ್ ಜೈಲು ಅಧಿಕಾರಿಗಳು ದೆಹಲಿ ಕೋರ್ಟ್ ಗೆ ಈ ಹಿಂದೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೇ ಸಂದರ್ಭದಲ್ಲಿ ದೆಹಲಿಯ ನ್ಯಾಯಾಲಯದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ, ಈ ಕುರಿತು ನಾಲ್ವರು ಅಪರಾಧಿಗಳಿಂದ ಶುಕ್ರವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದರು.
ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದನ್ನು ವಿಚಾರಣಾ ನ್ಯಾಯಾಲಯ ಜನವರಿ 31ರಂದು ತಡೆ ಹಿಡಿದಿತ್ತು. ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ಪವನ್ ಗುಪ್ತ, ವಿನಯ್ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಅವರನ್ನು ತಿಹಾರ್ ಜೈಲಿನಲ್ಲಿರಿಸಲಾಗಿದೆ.
ನಿರ್ಭಯಾ ಪ್ರಕರಣದ ವಿಚಾರಣೆಯನ್ನು ಫೆ. 11ಕ್ಕೆ ಮುಂದೂಡಿದ ಸುಪ್ರೀಂ
ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ನಿರಾಕರಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆ. 11ಕ್ಕೆ ಮುಂದೂಡಿದೆ. ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ವಿಶೇಷ ಮೇಲ್ಮನವಿಯನ್ನು ಫೆ. 11ರವರೆಗೆ ಮುಂದೂಡಿತು.
Advertisement