ಕಾಂಗ್ರೆಸ್ ಸಂಸದ ಯಾರ ಮೇಲೂ ಹಲ್ಲೆ ನಡೆಸಲಿಲ್ಲ, ನಮ್ಮ ಸಂಸದರ ಮೇಲೆಯೇ ಹಲ್ಲೆ ನಡೆದಿದೆ: ರಾಹುಲ್ ಸ್ಪಷ್ಟನೆ

ಲೋಕಸಭಾ ಸದನದ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಮೇಲೆ ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಹಲ್ಲೆ ನಡೆಸಿದ್ದಾರೆ ಎಂಬ ಕೇಂದ್ರ ಸರ್ಕಾರದ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಗೆಳೆದಿದ್ದಾರೆ.
ಕಾಂಗ್ರೆಸ್ ಸಂಸದ ಯಾರ ಮೇಲೂ ಹಲ್ಲೆ ನಡೆಸಲಿಲ್ಲ, ನಮ್ಮ ಸಂಸದರ ಮೇಲೆಯೇ ಹಲ್ಲೆ ನಡೆದಿದೆ: ರಾಹುಲ್ ಸ್ಪಷ್ಟನೆ
ಕಾಂಗ್ರೆಸ್ ಸಂಸದ ಯಾರ ಮೇಲೂ ಹಲ್ಲೆ ನಡೆಸಲಿಲ್ಲ, ನಮ್ಮ ಸಂಸದರ ಮೇಲೆಯೇ ಹಲ್ಲೆ ನಡೆದಿದೆ: ರಾಹುಲ್ ಸ್ಪಷ್ಟನೆ

ನವದೆಹಲಿ: ಲೋಕಸಭಾ ಸದನದ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಮೇಲೆ ಕಾಂಗ್ರೆಸ್ ಸಂಸದ ಮಣಿಕ್ಕಮ್ ಟಾಗೋರ್ ಹಲ್ಲೆ ನಡೆಸಿದ್ದಾರೆ ಎಂಬ ಕೇಂದ್ರ ಸರ್ಕಾರದ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಗೆಳೆದಿದ್ದಾರೆ.

ಪ್ರಧಾನಿಗಳು ವರ್ತಿಸುವ ರೀತಿಯಲ್ಲಿ ಮೋದಿ ವರ್ತಿಸುತ್ತಿಲ್ಲ. ಪ್ರಧಾನಿ ಹುದ್ದೆಯಲ್ಲಿರುವವರು ನಡೆದುಕೊಳ್ಳಲು ರೀತಿ-ನೀತಿಗಳಿವೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಯಾವುದೂ ಇಲ್ಲ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
 
ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸದ ಟಾಗೋರ್ ಯಾರ ಮೇಲೂ ದಾಳಿ ನಡೆಸಿಲ್ಲ. ಬದಲಾಗಿ, ಅವರ ಮೇಲೆಯೇ ಹಲ್ಲೆ ನಡೆದಿದೆ ಎಂದಿದ್ದಾರೆ. ತಾವು ವಯನಾಡಿನಲ್ಲಿನ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತು ಪ್ರಶ್ನಿಸಿದಾಗ, ಅದನ್ನು ಉತ್ತರಿಸುವ ಬದಲು ಸಚಿವರು ಪ್ರಶ್ನೆಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿದರು. 

ವಯನಾಡಿನಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ ಎಂಬ ವಿಷಯವನ್ನು ತಾವು ಪ್ರಸ್ತಾಪಿಸಲು ಮುಂದಾಗಿದ್ದೆವು. ಆದರೆ, ಬಿಜೆಪಿ ತಮಗೆ ಮಾತನಾಡಲು ಎಂದಿಗೂ ಅವಕಾಶ ನೀಡುವುದಿಲ್ಲ. ಅಂತೆಯೇ ಇಂದು ಕೂಡ ಅಸಂವಿಧಾನಿಕವಾಗಿ, ಸದನದ ಹೊರಗೆ ಪ್ರಸ್ತಾಪಿಸಿದ ವಿಷಯಗಳನ್ನು ಹರ್ಷವರ್ಧನ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಉಲ್ಲೇಖಿಸಿದರು ಎಂದು ರಾಹುಲ್ ಆರೋಪಿಸಿದರು. 
  
ಮುಖ್ಯ ವಿಷಯವನ್ನು ತಿರುಚಲಾಯಿತು. ಸಂಸತ್ತಿನ ಒಳಗೆ ತಮಗೆ ಮಾತನಾಡಲು ಅವಕಾಶ ದೊರಯಲಿಲ್ಲ. ತಮ್ಮ ಧ್ವನಿಯನ್ನು ಹತ್ತಿಕ್ಕಲು ಆಡಳಿತ ಪಕ್ಷ ಯಾವಾಗಲೂ ಇದೇ ತಂತ್ರಗಾರಿಕೆ ಉಪಯೋಗಿಸುತ್ತದೆ ಎಂದರು.
 
ನಂತರ ಈ ಕುರಿತು ಟ್ವೀಟ್ ಮಾಡಿರುವ ಅವರು, "ಸಂಸತ್ತಿನಲ್ಲಿ ಇಂದು ನಡೆದ ಗಲಭೆಯನ್ನು ನಾನು ಸರ್ಕಾರದ ವಿರುದ್ಧ ಪ್ರಶ್ನಿಸುವುದನ್ನು ತಡೆಯಲು ವಿನ್ಯಾಸಗೊಳಿಸಲಾಗಿತ್ತು. ಇದರಿಂದ ದೇಶದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ಬಳಿ ಯಾವುದೇ ಉಪಾಯವಿಲ್ಲ ಎಂಬುದನ್ನು ಯುವಜನರು ಸ್ಪಷ್ಟವಾಗಿ ನೋಡಬಹುದು. ಅವರನ್ನು ರಕ್ಷಿಸುವ ಸಲುವಾಗಿ ಬಿಜೆಪಿ ಸದಸ್ಯರು ಸಂಸತ್ತಿನಲ್ಲಿ ಗಲಭೆ ಉಂಟು ಮಾಡಿ ಚರ್ಚೆಯನ್ನು ತಡೆಯುತ್ತಾರೆ" ಎಂದಿದ್ದಾರೆ. 

ಆರೋಗ್ಯ ಸಚಿವರ  ಕಾಂಗ್ರೆಸ್ ಸಂಸದ ನಡೆಸಿದ ದಾಳಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ದೃಶ್ಯ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಮುದ್ರಿತ ದೃಶ್ಯಾವಳಿಗಳನ್ನು ಗಮನಿಸಿ. ಮಣಿಕ್ಕಮ್ ಟಾಗೋರ್ ಸದನದ ಪಡಸಾಲೆಗೆ ಹೋಗಲಿಲ್ಲ. ಯಾರ ಮೇಲೂ ಹಲ್ಲೆ ನಡೆಸಲಿಲ್ಲ. ಅವರ ಮೇಲೆ ಹಲ್ಲೆ ನಡೆಯಿತಷ್ಟೇ ಎಂದರು.

ವಯನಾಡಿನಲ್ಲಿನ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸುವುದಕ್ಕೂ ಮುನ್ನ ಕೇಂದ್ರ ಸಚಿವ ಡಾ.ಹರ್ಷವರ್ಧನ್, ರಾಹುಲ್ ಗಾಂಧಿ ದೆಹಲಿ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ವಿರುದ್ಧ ಟೀಕೆ ಮಾಡಿದ್ದನ್ನು ಖಂಡಿಸಲು ಮುಂದಾದರು. ಹರ್ಷವರ್ಧನ್ ಅವರ ಈ ಕ್ರಮವನ್ನು ವಿರೋಧಿಸಿ  ಕಾಂಗ್ರೆಸ್ ಸಂಸದರು ಸಂಸತ್ ನ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಆ ನಂತರವೂ ಹರ್ಷವರ್ಧನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಗೆ ಆಗ್ರಹಿಸಿದ್ದಕ್ಕೆ ಆಕ್ರೋಶಗೊಂಡ ಮಣಿಕ್ಕಮ್ ಟಾಗೋರ್ ಕೇಂದ್ರ ಸಚಿವರ ಆಸನದತ್ತ ಆಕ್ರೋಶಭರಿತರಾಗಿ ಮುನ್ನುಗ್ಗಿದರು. ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹಾಗೂ ಇನ್ನಿತರ ಸಂಸದರ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.  ಈ ಎಲ್ಲಾ ಪ್ರಹಸನದ ಪರಿಣಾಮ ಲೋಕಸಭಾ ಕಲಾಪವನ್ನು ಮುಂದೂಡಲಾಯಿತು. 

ದೆಹಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಆರು ತಿಂಗಳ ಬಳಿಕ ದೇಶದ ಯುವಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೊಣ್ಣೆಯಿಂದ ಹೊಡೆದು ದೇಶದಿಂದ ಹೊರಗೆ ಕಳುಹಿಸುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಸಂಸತ್ ನಲ್ಲಿ ವ್ಯಂಗ್ಯವಾಗಿ ಉತ್ತರಿಸಿದ್ದ ಪ್ರಧಾನಿ ಮೋದಿ ತಮ್ಮ ಮೇಲಿನ ದಾಳಿಯನ್ನು ಸಹಿಸುವುದಕ್ಕಾಗಿ ತಾವು ಪ್ರತಿ ದಿನ ಸೂರ್ಯ ನಮಸ್ಕಾರವನ್ನು ಹೆಚ್ಚು ಹೆಚ್ಚು ಮಾಡುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com