ನವದೆಹಲಿ: ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳ ಬಗ್ಗೆ ವಿಸ್ತೃತ ಪೀಠದ ವಿಚಾರಣೆಗೆ ಅವಕಾಶ ಕಲ್ಪಿಸುವ ಕ್ರಮವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ 9 ಸದಸ್ಯರ ನ್ಯಾಯಪೀಠವು, ತೀರ್ಪು ಮರುಪರಿಶೀಲಿಸುವ ಅಧಿಕಾರದ ಜೊತೆಗೆ, ಕಾನೂನು ತೊಡಕುಗಳನ್ನು ಪರಿಶೀಲಿಸುವಂತೆ ವಿಸ್ತೃತ ನ್ಯಾಯಪೀಠಕ್ಕೆ ಸೂಚಿಸುವ ಅಧಿಕಾರವೂ ಸುಪ್ರೀಂ ಕೋರ್ಟ್ಗೆ ಇದೆ ಎಂದು ಅಭಿಪ್ರಾಯಪಟ್ಟಿತು.
ಇಬ್ಬರೂ ವಕೀಲರಿಗೆ ವಾದ ಮಂಡನೆಗೆ ತಲಾ ಒಂದು ದಿನಗಳ ಅವಕಾಶ ಸಿಗಲಿದೆ. ಪೂರಕ ವಾದಕ್ಕಾಗಿ ಎರಡು ತಾಸು ಸಮಯ ನೀಡಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿತು. ವಿಸ್ತೃತ ನ್ಯಾಯಪೀಠವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸಂವಿಧಾನ ಮತ್ತು ಶ್ರದ್ಧೆಗಳನ್ನು ಆಧರಿಸಿ ವಿಚಾರಣೆ ನಡೆಸಲಿದೆ ಎಂದು ನ್ಯಾಯಪೀಠವು ಹೇಳಿತು.
ಇನ್ನು ಶಬರಿಮಲೆ ಪ್ರಕರಣದ ವಿಚಾರಣೆ ಫೆಬ್ರವರಿ 17ರಿಂದ ಮತ್ತೆ ಆರಂಭವಾಗಲಿದೆ.
Advertisement