ನವದೆಹಲಿ: ಮಾಜಿ ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಭಾಗಿಯಾಗಿದ್ದಾರೆ ಎನ್ನಲಾಗುವ ಏರ್ ಸೆಲ್ -ಮ್ಯಾಕ್ಸಿಸ್ ಕೇಸಿನ ವಸ್ತುಸ್ಥಿತಿ ವರದಿಯನ್ನು ಶುಕ್ರವಾರ ದೆಹಲಿ ಕೋರ್ಟ್ ಮುಂದೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಲ್ಲಿಸಿವೆ.
ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಜಾರಿ ನಿರ್ದೇಶನಾಲಯ, ಪ್ರಕರಣ ಕುರಿತು ತನಿಖೆ ಚುರುಕಾಗಿ ಮುಂದುವರಿದಿದೆ ಎಂದು ಹೇಳಿದೆ. ಲೆಟರ್ಸ್ ರೊಗೆಟರಿ(ಎಲ್ ಆರ್)ನ್ನು ಮಲೇಷಿಯಾಕ್ಕೆ ಕಳುಹಿಸಲಾಗಿದ್ದು ಅಲ್ಲಿಂದ ವರದಿ ಬರಲು ಕಾಯುತ್ತಿದ್ದೇವೆ ಎಂದು ಸಿಬಿಐ ಹೇಳಿದೆ.ವಿದೇಶಿ ಕೋರ್ಟ್ ನಿಂದ ನ್ಯಾಯಾಂಗ ತನಿಖೆಗೆ ಔಪಚಾರಿಕವಾಗಿ ನೆರವು ಕೇಳುವುದಕ್ಕೆ ಲೆಟರ್ಸ್ ರೊಗೆಟರಿ ಎಂದು ಕರೆಯುತ್ತೇವೆ.
ಇಂದು ವಸ್ತುಸ್ಥಿತಿ ವರದಿ ಸಲ್ಲಿಕೆಯಾದ ನಂತರ ದೆಹಲಿ ಕೋರ್ಟ್ ನ ಜಿಲ್ಲಾ ನ್ಯಾಯಾಧೀಶೆ ಸುಜಾತಾ ಕೊಹ್ಲಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದರು. ಕಳೆದ ಜನವರಿ 31ರಂದು ಕೋರ್ಟ್ ಎರಡೂ ತನಿಖಾ ತಂಡಗಳಿಗೆ ಎರಡು ವಾರಗಳೊಳಗೆ ವಿಚಾರಣೆಯ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಿತ್ತು.
Advertisement