1947ರಲ್ಲಿ ನೆಹರೂ ಅವರಿಗೆ ಪಟೇಲರು ಸಂಪುಟಕ್ಕೆ ಸೇರುವುದು ಇಷ್ಟವಿರಲಿಲ್ಲವೇ?:ಟ್ವಿಟ್ಟರ್ ನಲ್ಲಿ ಜೈಶಂಕರ್-ರಾಮಚಂದ್ರ ಗುಹಾ ಜಟಾಪಟಿ 

ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಇತಿಹಾಸತಜ್ಞ ರಾಮಚಂದ್ರ ಗುಹಾ ನಡುವೆ ಕುತೂಹಲಕಾರಿ ಟ್ವೀಟ್ ವಾರ್ ನಡೆದಿದೆ.
ರಾಮಚಂದ್ರ ಗುಹಾ-ಜೈಶಂಕರ್(ಸಂಗ್ರಹ ಚಿತ್ರ)
ರಾಮಚಂದ್ರ ಗುಹಾ-ಜೈಶಂಕರ್(ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಇತಿಹಾಸತಜ್ಞ ರಾಮಚಂದ್ರ ಗುಹಾ ನಡುವೆ ಕುತೂಹಲಕಾರಿ ಟ್ವೀಟ್ ವಾರ್ ನಡೆದಿದೆ. ಅದು ಕಾಂಗ್ರೆಸ್, ಜವಹರಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸಂಬಂಧಿಸಿದ್ದು. ಇಬ್ಬರೂ ತಮ್ಮದೇ ರೀತಿಯಲ್ಲಿ ಐತಿಹಾಸಿಕ ಉಲ್ಲೇಖಗಳನ್ನು ನೀಡುತ್ತಾ ವ್ಯಂಗ್ಯವಾಗಿ ಪರಸ್ಪರ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡಿದ್ದಾರೆ.


ಈ ದೇಶದ ಪ್ರಥಮ ಗೃಹ ಸಚಿವ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜೊತೆ ನಿಕಟವರ್ತಿಯಾಗಿ ಕೆಲಸ ಮಾಡಿದ್ದ ಹಿರಿಯ ಐಎಎಸ್ ಅಧಿಕಾರಿ ವಿ ಪಿ ಮೆನನ್ ಅವರ ಜೀವನಚರಿತ್ರೆ ಕುರಿತ ಪುಸ್ತಕವನ್ನು ಲೇಖಕಿ ನಾರಾಯಣಿ ಬಸು ಬರೆದಿದ್ದು ಅದನ್ನು ಇತ್ತೀಚೆಗೆ ವಿದೇಶಾಂಗ ಸಚಿವ ಜೈಶಂಕರ್ ಬಿಡುಗಡೆ ಮಾಡಿದ್ದರು. ಪುಸ್ತಕದಲ್ಲಿ ಬರುವ ವಿಷಯವನ್ನು ಓದಿ ಒಂದು ಮಹತ್ವವಾದ ಕುತೂಹಲಕಾರಿ ಅಂಶವನ್ನು ಪುಸ್ತಕದಿಂದ ತಿಳಿದುಕೊಂಡೆ ಎಂದು ಸಚಿವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದರು.


ಈ ದೇಶದ ಐತಿಹಾಸಿಕ ಘಟನೆಗಳಿಗೆ ನಾರಾಯಣಿ ಬಸು ಅವರ ಪುಸ್ತಕ ಸರಿಯಾದ ನ್ಯಾಯ ಒದಗಿಸಿದೆ.ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಜವಹರಲಾಲ್ ನೆಹರೂ ಪ್ರಧಾನಿಯಾಗಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಸಂದರ್ಭದಲ್ಲಿ ಮೊದಲಿಗೆ ಸರ್ದಾರ್ ಪಟೇಲ್ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಲು ನೆಹರೂ ಅವರಿಗೆ ಇಷ್ಟವಿರಲಿಲ್ಲವಂತೆ. ಸಂಪುಟ ಸಚಿವರ ಮೊದಲ ಪಟ್ಟಿಯಲ್ಲಿ ಪಟೇಲ್ ಅವರ ಹೆಸರು ಇರಲಿಲ್ಲವಂತೆ. ಇದೊಂದು ಬಹುಮುಖ್ಯವಾಗಿ ಚರ್ಚೆಯಾಗಬೇಕಾದ ವಿಷಯವೇ. ಇಲ್ಲಿ ಲೇಖಕಿ ವಾಸ್ತವ ಸ್ಥಿತಿಗೆ ಸಹಜವಾಗಿ ಬರೆದಿರುವುದು ಗಮನಾರ್ಹ ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದರು.


ಈ ಟ್ವೀಟ್ ಗೆ ರಾಮಚಂದ್ರ ಗುಹಾ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟು, ಇದೊಂದು ಸುಳ್ಳು ಸುದ್ದಿ. ಪ್ರೊಫೆಸರ್ ಶ್ರೀನಾಥ್ ರಾಘವನ್ ಇತಿಹಾಸವನ್ನು ನಾಶಪಡಿಸಿ ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಸುಳ್ಳು ವದಂತಿ ಹಬ್ಬಿಸುವುದು, ಇದರಿಂದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರ ಮಧ್ಯೆ ಜಗಳ ತಂದೊಡ್ಡುವುದು ನವ ಭಾರತ ನಿರ್ಮಾಣಕ್ಕೆ ವಿದೇಶಾಂಗ ಸಚಿವರು ಮಾಡುವ ಕೆಲಸವಾಗಬಾರದು, ಇದನ್ನು ನೀವು ಬಿಜೆಪಿಯ ಐಟಿ ವಿಭಾಗಕ್ಕೆ ಬಿಟ್ಟುಬಿಡಬೇಕು ಎಂದು ಕಟುವಾಗಿಯೇ ಟ್ವೀಟ್ ಮಾಡಿದ್ದರು.


ಇದಕ್ಕೆ ವಿದೇಶಾಂಗ ಸಚಿವರು, ಕೆಲವು ವಿದೇಶಾಂಗ ಸಚಿವರು ಪುಸ್ತಕ ಓದುತ್ತಾರೆ, ಕೆಲವು ಪ್ರೊಫೆಸರ್ ಗಳಿಗೆ ಇದು ಉತ್ತಮ ಹವ್ಯಾಸ, ನಿಮ್ಮ ವಾದ ಹಾಗಾದರೆ ನಿನ್ನೆ ನಾನು ಬಿಡುಗಡೆ ಮಾಡಿದ ಪುಸ್ತಕ ಓದಿ ಎಂದು ತಿರುಗೇಟು ಕೊಟ್ಟರು.


ಅದಕ್ಕೆ ರಾಮಚಂದ್ರ ಗುಹಾ ಸುಮ್ಮನಾಗಲಿಲ್ಲ. 1947ರ ಆಗಸ್ಟ್ 1ರಂದು ನೆಹರೂರವರು ಪಟೇಲ್ ಗೆ ಬರೆದಿದ್ದರು ಎನ್ನಲಾದ ಪತ್ರವನ್ನು ಪೋಸ್ಟ್ ಮಾಡಿದರು. ಅದರಲ್ಲಿ ಸಂಪುಟಕ್ಕೆ ನೀವು ಬಲಿಷ್ಠ ಸ್ತಂಭವಾಗಿದ್ದು ಮುಕ್ತ ಭಾರತದ ಮೊದಲ ಸಚಿವ ಸಂಪುಟಕ್ಕೆ ನೀವು ಸೇರಿಕೊಳ್ಳಬೇಕು ಎಂದು ನೆಹರೂ ಪಟೇಲ್ ಗೆ ಆಹ್ವಾನ ನೀಡಿದ್ದನ್ನು ಉಲ್ಲೇಖಿಸಿ ಇದನ್ನು ಸಚಿವ ಜೈಶಂಕರ್ ಗೆ ಯಾರಾದರೂ ತೋರಿಸಿ ಎಂದು ಟ್ವೀಟ್ ಮಾಡಿದರು.


ನಂತರ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಕೂಡ ವಿದೇಶಾಂಗ ಸಚಿವರನ್ನು ತರಾಟೆಗೆ ತೆಗೆದುಕೊಂಡಿತು. ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಕೂಡ ನೆಹರೂ ಪಟೇಲ್ ಅವರಿಗೆ ಬರೆದಿದ್ದರು ಎನ್ನಲಾದ ಸರಣಿ ಪತ್ರಗಳನ್ನು ಟ್ವೀಟ್ ಮೂಲಕ ಪೋಸ್ಟ್ ಮಾಡಿದರು. ಸಂಸದ ಶಶಿ ತರೂರ್ ಕೂಡ ಪ್ರೊಫೆಸರ್ ರಾಘವನ್ ಅವರ ಪತ್ರವನ್ನು ಟ್ಯಾಗ್ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com