ಸಿಎಎ ವಿರೋಧಿ ಭಾಷಣ: ವೈದ್ಯ ಕಫೀಲ್ ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು!
ಮಥುರಾ: ಗೋರಖ್ ಪುರದ ಅಮಾನತುಗೊಂಡಿರುವ ವೈದ್ಯ ಕಫೀಲ್ ಖಾನ್ ವಿರುದ್ಧ ಈಗ ಎನ್ ಎಸ್ ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಅಮಾನತುಗೊಂಡಿರುವ ವೈದ್ಯ 2019 ರ ಡಿ.12 ರಂದು ಅಲೀಘರ್ ಮುಸ್ಲಿಂ ವಿವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಬಂಧನಕ್ಕೊಳಗಾಗಿದ್ದ. ನಂತರ ಈತನಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಆದರೂ ಸಹ ಆತನನ್ನು ಮಥುರಾ ಜೈಲಿನಿಂದ ಬಿಡುಗಡೆ ಮಾಡಿರಲಿಲ್ಲ.
ಇತ್ತೀಚಿನ ವರದಿಯ ಪ್ರಕಾರ ಕುಟುಂಬ ಸದಸ್ಯರು ಕಫೀಲ್ ಖಾನ್ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಪರಿಣಾಮ ಜಾಮೀನು ದೊರೆತರೂ ಖಾನ್ ಬಂಧಮುಕ್ತವಾಗುವುದು ಕಷ್ಟ ಸಾಧ್ಯವಾಗಿದೆ. "ಇದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಕಫೀಲ್ ಖಾನ್ ನ್ನು ರಾಜ್ಯ ಸರ್ಕಾರದ ಆಜ್ಞೆಯಂತೆ ಟಾರ್ಗೆಟ್ ಮಾಡಲಾಗುತ್ತಿದೆ". ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಜೈಲಿನಿಂದ ಖಾನ್ ನ್ನು ಬಿಡುಗಡೆಗೊಳಿಸುವುದಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಕುಟುಂಬ ಸದಸ್ಯರು ಅಲೀಘರ್ ನಲ್ಲಿರುವ ಸಿಜೆಂ ಮೊರೆ ಹೋಗಿದ್ದರು. ಆದರೆ ಆ ವೇಳೆಗೆ ಜೈಲಿಗೆ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನಿಂದ ವಿಶೇಷ ಸಂದೇಶ ರವಾನೆಯಾಗಿ ಎನ್ ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂಬುದು ತಿಳಿದುಬಂದಿದೆ.
ಗೋರಖ್ ಪುರದಲ್ಲಿರುವ ಬಿಆರ್ ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಶಿಶು ತಜ್ಞರಾಗಿರುವ ಕಲೀಫ್ ಖಾನ್ ಎಎಂಯು ಕ್ಯಾಂಪಸ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎರಡು ಧರ್ಮಗಳ ನಡುವೆ ದ್ವೇಷ ಉಂಟುಮಾಡುವ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.