ನವದೆಹಲಿ: ಅಡ್ವೊಕೇಟ್ ಸಂಜಯ್ ಹೆಗ್ಡೆ, ಸಾಧನಾ ರಾಮಚಂದ್ರನ್ ಹಾಗೂ ಮತ್ತೋರ್ವರನ್ನು ಶಾಹಿನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾ.ಎಸ್ ಕೆ ಕೌಲ್, ಕೆಎಂ ಜೋಸೆಫ್ ಅವರಿದ್ದ ಪೀಠ, ಶಾಹಿನ್ ಬಾಗ್ ಪ್ರತಿಭಟನೆಯಿಂದ ದೆಹಲಿ ಸಂಚಾರ ವ್ಯವಸ್ಥೆಗೆ ಉಂಟಾಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕೆಂದು ದೆಹಲಿ ಪೊಲೀಸರಿಗೆ ನಿರ್ದೇಶನ ಕೋರಿ ಅಡ್ವೊಕೇಟ್ ಅಮಿತ್ ಸಾಹ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿತ್ತು.
ಇದೇ ವೇಳೆ ಪ್ರತಿಭಟನೆಯನ್ನು ಸ್ಥಳಾಂತರ ಮಾಡುವಂತಹ ಪರ್ಯಾಯ ಮಾರ್ಗಗಳ ಬಗ್ಗೆ ಗಮನ ಹರಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಮಾಜದ ಒಂದು ವರ್ಗ ನಿರ್ದಿಷ್ಟ ದೃಷ್ಟಿಕೋನ ಹೊಂದಿದೆ. ಪ್ರತಿಭಟನೆ ನಡೆಸಲಿ, ಅದನ್ನು ಒಪ್ಪೋಣ ಆದರೆ ಪ್ರಶ್ನೆ ಇರುವುದು ಆ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದು ಸೂಕ್ತವೇ ಎಂಬುದೆಂದು ನ್ಯಾ.ಕೌಲ್ ಹೇಳಿದ್ದಾರೆ.
ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾ. ಜೋಸೆಫ್, ನಾವು ಜನರಿಗೆ ಪ್ರತಿಭಟನೆ ನಡೆಸುವ ಹಕ್ಕು ಇಲ್ಲ ಎಂದು ಹೇಳುತ್ತಿಲ್ಲ. ಕಾನೂನನ್ನು ಪ್ರಶ್ನಿಸಿ ಕೋರ್ಟ್ ಮುಂದೆ ತರಲಾಗಿದೆ. ಆದರೆ ಇದಕ್ಕಾಗಿ ರಸ್ತೆಗಳನ್ನು ಬಂದ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆ ಇದ್ದಾಗ ಅಭಿಪ್ರಾಯಗಳು ಮೂಡುತ್ತವೆ. ಪ್ರತಿಯೊಂದು ಹಕ್ಕು ಕೂಡ ಜವಾಬ್ದಾರಿಯ ಜೊತೆ ಬರುತ್ತದೆ. ಪ್ರತಿಭಟನೆ ನಡೆಸಲು ಹಕ್ಕಿದೆ ಎಂದು ಹೇಳಿರುವ ನ್ಯಾಯಾಲಯ ವಿಚಾರಾಣೆಯನ್ನು ಫೆ.24 ಕ್ಕೆ ಮುಂದೂಡಿದೆ
Advertisement