ನಾಪತ್ತೆಯಾಗಿದ್ದ ತೆಲಂಗಾಣ ಶಾಸಕನ ಮೂವರು ಸಂಬಂಧಿಗಳ ಶವ ಗೋದಾವರಿ ಕಾಲುವೆಯಲ್ಲಿ ಪತ್ತೆ

ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದ ತೆಲಂಗಾಣ ಶಾಸಕ ಮನೋಹರ ರೆಡ್ಡಿ ಅವರ ಮೂವರು ಸಂಬಂಧಿಗಳು ಗೋದಾವರಿ ನದಿಯ ಕಾಕತಿಯ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮನೋಹರ್ ರೆಡ್ಡಿ
ಮನೋಹರ್ ರೆಡ್ಡಿ

ಹೈದಾರಾಬಾದ್: ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದ ತೆಲಂಗಾಣ ಶಾಸಕ ಮನೋಹರ ರೆಡ್ಡಿ ಅವರ ಮೂವರು ಸಂಬಂಧಿಗಳು ಗೋದಾವರಿ ನದಿಯ ಕಾಕತಿಯ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕರೀಂನಗರ ಜಿಲ್ಲೆಯ ಯಡವುಲಪಲ್ಲಿ ಗ್ರಾಮದ ಬಳಿ ಕಾಲುವೆಯಲ್ಲಿ ಪತ್ತೆಯಾದ ಕಾರಿನಲ್ಲಿ ಮನೋಹರ್ ರೆಡ್ಡಿ ಅವರ ಸಹೋದರಿ ರಾಧಿಕಾ, ಆಕೆಯ ಪತಿ ನರೆಡ್ಡಿ ಸತ್ಯನಾರಾಣಯ ಹಾಗೂ ಅವರ ಮಗಳ ಶವ ಸೋಮವಾರ ಪತ್ತೆಯಾಗಿದೆ.

ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೂವರ ಶವ ಪತ್ತೆಯಾಗಿದ್ದು, ಈ ಮೂವರು ಜನವರಿ 27ರಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಕರೀಂನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಸಹ ದಾಖಲಾಗಿತ್ತು.

ಪತಿಯ ಜತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಿಂದಾಗಿ ಕಾಲುವೆಗೆ ಬಿದ್ದಿದ್ದ ಮತ್ತೊಬ್ಬ ಮಹಿಳೆ ಶವಕ್ಕಾಗಿ ಸ್ಥಳೀಯ ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಶಾಸಕರ ಸಂಬಂಧಿಗಳ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿ ಕಾಲುವೆಗೆ ಬಿದ್ದಿದ್ದರು. ಈ ವೇಳೆ ಸ್ಥಳೀಯರು ಕೂಡಲೇ ಪತಿಯನ್ನು ರಕ್ಷಿಸಿದ್ದರು. ಆದರೆ ಕೊಚ್ಚಿ ಹೋಗಿದ್ದ ಪತ್ನಿಗಾಗಿ ಇಂದು ಸಹ ಶೋಧ ಕಾರ್ಯ ಮುಂದುವರೆದಿತ್ತು. ಈ ವೇಳೆ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೂವರ ಶವ ಪತ್ತೆಯಾಗಿದೆ. 

ಕರೀಂನಗರದಿಂದ ಹೈದರಾಬಾದ್ ಗೆ ಹೋಗುತ್ತಿದ್ದ ಶಾಸಕರ ಸಂಬಂಧಿಗಳ ಕಾರು ಅಪಘಾತಕ್ಕೀಡಾಗಿ ಕಾಲುವೆಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com