ಮುಟ್ಟಾದ ಮಹಿಳೆ ಮಾಡಿದ ಆಹಾರ ತಿಂದ್ರೆ ಮುಂದಿನ ಜನ್ಮದಲ್ಲಿ ನಾಯಿ, ದನಗಳಾಗುತ್ತಾರಂತೆ..!

ಮುಟ್ಟಾದ ಮಹಿಳೆ ಮಾಡಿದ ಆಹಾರವನ್ನು ತಿಂದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರಂತೆ.. ಈ ಮಾತನ್ನು ನಾವು ಹೇಳುತ್ತಿಲ್ಲ... ಗುಜರಾತ್ ಮೂಲದ ಸ್ವಾಮಿಯೊಬ್ಬರು ಹೇಳಿದ್ದು...
ಸ್ವಾಮಿ ಕೃಷ್ಣಸ್ವರೂಪ್ ದಾಸ್ಜಿ
ಸ್ವಾಮಿ ಕೃಷ್ಣಸ್ವರೂಪ್ ದಾಸ್ಜಿ

ಅಹ್ಮದಾಬಾದ್: ಮುಟ್ಟಾದ ಮಹಿಳೆ ಮಾಡಿದ ಆಹಾರವನ್ನು ತಿಂದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರಂತೆ.. ಈ ಮಾತನ್ನು ನಾವು ಹೇಳುತ್ತಿಲ್ಲ... ಗುಜರಾತ್ ಮೂಲದ ಸ್ವಾಮಿಯೊಬ್ಬರು ಹೇಳಿದ್ದು...

ಗುಜರಾತ್‌ನ ಭುಜ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಸ್ವಾಮಿ ಕೃಷ್ಣಸ್ವರೂಪ್ ದಾಸ್ಜಿ  ಮಹಿಳೆಯರ ಬಗ್ಗೆ ಇಂತಹ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, 'ಮುಟ್ಟಿನ ಅವಧಿಯಲ್ಲಿ ಅಡುಗೆ ಮಾಡುವ ಮಹಿಳೆಯರ ಬಗ್ಗೆ ಸ್ವಾಮಿ ಕೃಷ್ಣಸ್ವರೂಪ್ ದಾಸ್ಜಿ ಇಂತಹ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸ್ವಾಮಿ 'ಮಹಿಳೆ ಮುಟ್ಟಿನ ಅವಧಿಯಲ್ಲಿ ತನ್ನ ಗಂಡನಿಗೆ ಅಡುಗೆ ಮಾಡಿದರೆ ಅವಳು ಖಂಡಿತವಾಗಿಯೂ ಮುಂದಿನ ಜನ್ಮದಲ್ಲಿ ನಾಯಿಯಾಗಿ ಜನಿಸುತ್ತಾಳೆ ಎಂದಿದ್ದಾರೆ. ಅಂತೆಯೇ ಮುಟ್ಟಿನ ಅವಧಿಯಲ್ಲಿ ಪತ್ನಿ ಮಾಡಿದ ಊಟ ತಿನ್ನುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಎತ್ತಾಗಿ ಜನಿಸಲಿದ್ದಾನಂತೆ.

ಶಾಸ್ತ್ರದಲ್ಲಿ ಈ ಬಗ್ಗೆ ಸರಿಯಾಗಿ ವಿವರಿಸಲಾಗಿದ್ದು, ಮದುವೆ ನಂತರ ಆಹಾರ ಹೇಗೆ ಸೇವಿಸಬೇಕೆಂಬುದನ್ನು ತಿಳಿದಿರಬೇಕೆಂದು ಅವರು ಹೇಳಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ತಪ್ಪಸ್ಸಂತೆ ಅದನ್ನು ಕಠಿಣವಾಗಿ ಆಚರಿಸಬೇಕು. ಪುರುಷರು ಬೇಕಿದ್ದರೆ ಅಡುಗೆ ಮಾಡಿಕೊಳ್ಳಬಹುದು. ಅಂತೆಯೇ ಮುಟ್ಟಾದ ಮಹಿಳೆ ಕೈಯಲ್ಲಿ ತಯಾರಾದ ಆಹಾರ ಸೇವನೆ ಮಾಡಿದರೆ ನೀವೂ ದೋಷಿಗಳಾಗ್ತೀರಾ ಎಂದು ಪುರುಷರಿಗೆ ಸ್ವಾಮಿ ಕಿವಿಮಾತು ಹೇಳಿದ್ದಾರೆ. 

10 ವರ್ಷಗಳಲ್ಲಿ ಇದೇ ಮೊದಲ ಬಾರಿ ನಾನು ಇಂಥ ಹೇಳಿಕೆ ನೀಡ್ತಿದ್ದೇನೆ. ಧರ್ಮದಲ್ಲಿರುವ ಗುಪ್ತ ವಿಷ್ಯಗಳನ್ನು ಹೇಳಬಾರದು ಎಂದು ಕೆಲ ಸಂತರು ಸಲಹೆ ನೀಡಿದ್ದಾರೆ. ಆದರೆ ಅದನ್ನು ಹೇಳದೆ ಹೋದರೆ ನಿಮಗೆ ತಿಳಿಯುವುದಿಲ್ಲವೆಂದು ಸ್ವಾಮಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಇದೇ ಗುಜರಾತ್ ನ ಖಾಸಗಿ ಶಾಲೆಯೊಂದು ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರೆಯೋ ಇಲ್ಲವೋ ಎಂದು ತಿಳಿಯಲು ಅವರ ಒಳಉಡುಪಿನ ಪರೀಕ್ಷೆ ಮಾಡಿ ಸುದ್ದಿಗೆ ಗ್ರಾಸವಾಗಿತ್ತು. ಈ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಈ ಸ್ವಾಮಿ ಹೇಳಿದ ಮುಟ್ಟಿನ ಕಥೆ ಇದೀಗ ವೈರಲ್ ಆಗುತ್ತಿದೆ. ಇನ್ನು ಸ್ವಾಮಿಯ  ಹೇಳಿಕೆಗೆ ಎಲ್ಲಿಂದ ನಗಬೇಕೋ ತಿಳಿಯುತ್ತಿಲ್ಲ ಎಂದು ಕೆಲವರು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಒಟ್ಟಾರೆ ಇಂತಹುದೊಂದು ವಿವಾದಾತ್ಮಕ ಹೇಳಿಕೆ ಮೂಲಕ ಮತ್ತೋರ್ವ ಸ್ವಾಮಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com