ಜೈಪುರ್: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರಿಗೆ ಪೆಟ್ರೋಲ್ ನಲ್ಲಿ ಅದ್ದಿದ ಸ್ಕ್ರೂಡ್ರೈವರ್ ನಿಂದ ಖಾಸಗಿ ಭಾಗಕ್ಕೆ ತಿವಿದು ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.
ದ್ವಿಚಕ್ರ ವಾಹನ ಶೋರೂಮ್ನಲ್ಲಿ ಹಣ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿ ಶೋರೂಮ್ ಸಿಬ್ಬಂದಿಗಳು, ಇಬ್ಬರು ದಲಿತ ಯುವಕರ ಬಟ್ಟೆ ಬಿಚ್ಚಿ, ಅವರನ್ನು ಅಮಾನವೀಯವಾಗಿ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಭಾನುವಾರ ಶೋರೂಮ್ ನಿಂದ ಹಣ ಕದಿಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದರು. ಅವರ ಮೇಲೆ ಶೋರೂಮ್ ಸಿಬ್ಬಂದಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಆ ವೇಳೆ ಚಿತ್ರೀಕರಿಸಿದ ವಿಡಿಯೊ ವೈರಲ್ ಆಗಿದೆ. ವಿಡಿಯೊ ಮೂಲಕ ಘಟನೆ ಬೆಳಕಿಗೆ ಬಂದಿದ್ದು ಸಂತ್ರಸ್ತರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಂಚೋಡಿ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ರಾಜ್ಪಾಲ್ ಸಿಂಗ್ ಹೇಳಿದ್ದಾರೆ.
ಹಣ ಕದ್ದ ಆರೋಪದಲ್ಲಿ ಇಬ್ಬರು ದಲಿತರ ವಿರುದ್ಧ ಶೋರೂಮ್ ಸಿಬ್ಬಂದಿಗಳು ದೂರು ನೀಡಿದ್ದಾರೆ.
ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಏಳು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾನವೀಯ ಘಟನೆ ಖಂಡಿಸಿದ ರಾಹುಲ್
ರಾಜಸ್ಥಾನದ ನಾಗೌರ್ನಲ್ಲಿ ಇಬ್ಬರು ದಲಿತ ಯುವಕರ ಮೇಲೆ ಅಮಾನವೀಯ ಹಲ್ಲೆ ನಡೆಸುತ್ತಿರುವ ವಿಡಿಯೊ ಭಯಾನಕವಾಗಿದೆ. ಈ ಅಪರಾಧವೆಸಗಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕು ಎಂದು ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Advertisement