ನವದೆಹಲಿ: ರಸ್ತೆಯಲ್ಲಿ ಕುಳಿತು ತಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರುವುದು ಸಹ ಒಂದು ರೀತಿಯ ಭಯೋತ್ಪಾದನೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶಾಹೀನ್ ಬಾಗ್ ಪ್ರತಿಭಟನೆಯನ್ನು ಉದ್ದೇಶಿಸಿ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಭಾರತೀಯ ಛತ್ರ ಸಂಸದ್ ಉದ್ದೇಶಿಸಿ ಮಾತನಾಡಿದ ಕೇರಳ ರಾಜ್ಯಪಾಲರು, "ಆಕ್ರಮಣಶೀಲತೆ ಹಿಂಸೆಯ ರೂಪದಲ್ಲಿ ಮಾತ್ರ ಬರುವುದಿಲ್ಲ. ಇದು ಅನೇಕ ರೂಪಗಳಲ್ಲಿ ಬರುತ್ತದೆ. ನೀವು ನನ್ನ ಮಾತನ್ನು ಕೇಳದಿದ್ದರೆ, ನಾನು ಸಾಮಾನ್ಯ ಜನ ಜೀವನಕ್ಕೆ ಅಡ್ಡಿಪಡಿಸುತ್ತೇನೆ" ಎನ್ನುತ್ತಾರೆ ಎಂದರು.
"ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಮೂಲತತ್ವವಾಗಿದೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಐದು ಜನರು ವಿಜ್ಞಾನ ಭವನದ ಹೊರಗೆ ಕುಳಿತು ಈ ವಿದ್ಯಾರ್ಥಿಗಳ ಸಂಸತ್ತು ತಾವು ಒಪ್ಪುವ ನಿರ್ಣಯವನ್ನು ಅಂಗೀಕರಿಸದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಹೇಳುತ್ತಾರೆ - ಇದು ಸಹ ಭಯೋತ್ಪಾದನೆಯ ಇನ್ನೊಂದು ರೂಪ" ಎಂದು ಖಾನ್ ಹೇಳಿದ್ದಾರೆ.
ಇದೇ ವೇಳೆ, ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನಾಕಾರರು ಸಂವಿಧಾನದ ಪೀಠಿಕೆ ಓದುತ್ತಿರುವುದನ್ನು ಪ್ರಸ್ತಾಪಿಸಿದ ಖಾನ್, ಪ್ರಮಾಣವಾಗಿ ಹೇಳಬೇಕೆಂದರೆ, ಜನರು ಸಂವಿಧಾನದ ಪೀಠಿಕೆಯನ್ನು ಓದಲು ಪ್ರಾರಂಭಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪೀಠಿಕೆ ಏನು ಹೇಳುತ್ತದೆ? ಅದು ಚಿಂತನೆ, ಅಭಿವ್ಯಕ್ತಿ, ನಂಬಿಕೆ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ. ವಿಷಯಗಳಲ್ಲಿ ಗೊಂದಲ ಸೃಷ್ಟಿಸಬೇಡಿ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಿಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರಲು ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ 15 ರಿಂದ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದ ದೆಹಲಿಯನ್ನು ಉತ್ತರ ಪ್ರದೇಶದೊಂದಿಗೆ ಸಂಪರ್ಕಿಸುವ ಕಲಿಂದಿ ಕುಂಜ್ ರಸ್ತೆಯನ್ನು ಮುಚ್ಚಲಾಗಿದೆ.
ಇನ್ನು ಶಾಹೀನ್ ಬಾಗ್ ಪ್ರತಿಭಟನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಪ್ರತಿಭಟನೆಯ ಹಕ್ಕನ್ನು ಎತ್ತಿಹಿಡಿದಿದೆ. ಆದರೆ ಪ್ರತಿಭಟನಾ ಸ್ಥಳವನ್ನು ಬದಲಿಸುವಂತೆ ಸಲಹೆ ನೀಡಿದೆ.
Advertisement