ದೆಹಲಿ ಹಿಂಸಾಚಾರ: ಸಂತ್ರಸ್ಥರಿಗೆ ಪರಿಹಾರ ಘೋಷಣೆ, ತಪ್ಪಿತಸ್ಥ ಆಪ್ ನಾಯಕರಿಗೆ ದುಪ್ಪಟ್ಟು ಶಿಕ್ಷೆ ನೀಡಿ: ಸಿಎಂ ಕೇಜ್ರಿವಾಲ್

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದ ಸಂತ್ರಸ್ಥರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರಿಹಾರ ಘೋಷಣೆ ಮಾಡಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಪ್ ನಾಯಕರು ತಪ್ಪು ಮಾಡಿದ್ದರೆ ಅವರಿಗೆ ದುಪ್ಪಟ್ಟು ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಸಿಎಂ ಕೇಜ್ರಿವಾಲ್ ಸುದ್ದಿಗೋಷ್ಠಿ
ಸಿಎಂ ಕೇಜ್ರಿವಾಲ್ ಸುದ್ದಿಗೋಷ್ಠಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದ ಸಂತ್ರಸ್ಥರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರಿಹಾರ ಘೋಷಣೆ ಮಾಡಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಪ್ ನಾಯಕರು ತಪ್ಪು ಮಾಡಿದ್ದರೆ ಅವರಿಗೆ ದುಪ್ಪಟ್ಟು ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

ಸತತ 3 ದಿನಗಳ ಹಿಂಸಾಚಾರದ ಬಳಿಕ ನಿಧಾನವಾಗಿ ರಾಷ್ಟ್ರ ರಾಜಧಾನಿ ದೆಹಲಿ ಸಹಜಸ್ಥಿತಿಯತ್ತ ಮರಳುತ್ತಿದ್ದು, ಇದೇ ಸಂದರ್ಭದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಹಿಂಸಾಚಾರದ ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದರು. ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ, ಗಂಭೀರ ಗಾಯಾಳುಗಳಿಗೆ ತಲಾ 5 ಲಕ್ಷ ರೂ ಮತ್ತು ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ ತಲಾ 20 ಸಾವಿರ ರೂ ನೀಡುವುದಾಗಿ ಹೇಳಿದರು.

ಅಂತೆಯೇ ಹಿಂಸಾಚಾರದಲ್ಲಿನ ಅನಾಥ ಸಂತ್ರಸ್ಥರಿಗೆ 3 ಲಕ್ಷ ರೂಗಳನ್ನು ಮತ್ತು ಹಿಂಸಾಚಾರದಲ್ಲಿ ರಿಕ್ಷಾಗಳನ್ನು ಕಳೆದುಕೊಂಡವರಿಗೆ 25 ಸಾವಿರ ರೂ ಸಹಾಯಧನ ನೀಡಲಾಗುವುದು. ಅಲ್ಲದೆ ಮನೆ ಮತ್ತು ಅಂಗಡಿಗಳನ್ನು ಕಳೆದುಕೊಂಡವರಿಗೆ ತಲಾ 5 ಲಕ್ಷ ರೂ ಪರಿಹಾರ ಧನ ನೀಡುವುದಾಗಿ ಹೇಳಿದರು. ಅಲ್ಲದೆ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿಯೂ ಸರ್ಕಾರದ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಅಪಘಾತಗಳಿಗೆ ನೀಡಲಾಗುತ್ತಿದ್ದ ಫಾರ್ಶ್ಟಾ ಯೋಜನೆಯಡಿಯಲ್ಲೇ ಹಿಂಸಾಚಾರ ಸಂತ್ರಸ್ಥರು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು. 

ಅಂತೆಯೇ ಪ್ರಸ್ತುತ ದೆಹಲಿಯಲ್ಲಿ ಹಿಂಸಾಚಾರ ಮತ್ತು ಗಲಭೆ ಸಂಪೂರ್ಣ ನಿಯಂತ್ರಣದಲ್ಲಿದೆ. ನಿನ್ನೆಯಿಂದ ಈ ವರೆಗೂ ಯಾವುದೇ ರೀತಿಯ ಗಲಭೆಗಳಾಗಿಲ್ಲ. ಅಂತೆಯೇ ಕರ್ಫ್ಯೂ ಹೇರಲಾಗಿರುವ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಆಹಾರ ವಸ್ತುಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಹಿಂಸಾಚಾರ ನಡೆದಿದ್ದ ಈಶಾನ್ಯ ದೆಹಲಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದರು.

ತಪ್ಪಿತಸ್ಥ ಆಪ್ ನಾಯಕರಿಗೆ ದುಪ್ಪಟ್ಟು ಶಿಕ್ಷೆ ನೀಡಿ
ಇದೇ ವೇಳೆ ಹಿಂಸಾಚಾರದಲ್ಲಿ ಆಪ್ ನಾಯಕರೂ ಕೂಡ ಭಾಗಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅರವಿಂದ್ ಕೇಜ್ರಿವಾಲ್, ಈ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಒಂದು ವೇಳೆ ಹಿಂಸಾಚಾರದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಕೈವಾಡವಿದ್ದರೆ ಅವರಿಗೆ ದುಪ್ಪಟ್ಟು ಶಿಕ್ಷೆ ನೀಡಬೇಕು. ಹಿಂಸಾಚಾರಕ್ಕೆ ಕಾರಣರಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಇನ್ನು ಹಿಂಸಾಚಾರದ ವೇಳೆ ಬಲಿಯಾಗಿದ್ದ ಗುಪ್ತಚರ ಇಲಾಖೆ ಅಧಿಕಾರಿಯ ಸಾವಿನಲ್ಲಿ ಆಪ್ ನಾಯಕ ಹಾಜಿ ತಾಹಿರ್ ಹುಸೇನ್ ಅವರ ಕೈವಾಡವಿದೆ ಎಂಬ ಆರೋಪವಿತ್ತು. ಇದನ್ನು ಆಪ್ ಮುಖಂಡ ಹುಸ್ಸೇನ್ ತಳ್ಳಿ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com