ನವದೆಹಲಿ: ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಹಾಗೂ ಹಲವು ನಿವೃತ್ತ ಐಎಎಸ್ ಅಧಿಕಾರಿಗಳು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳು ಕೇಂದ್ರ ಸರ್ಕಾರದ ವಿವಾದಾತ್ಮಕ ಎನ್ ಪಿಆರ್ ಮತ್ತು ಎನ್ ಆರ್ ಸಿ ವಿರೋಧಿಸಿ ಬಹಿರಂಗ ಪತ್ರ ಬರೆದಿದ್ದಾರೆ.
ಎನ್ ಆರ್ ಸಿ ಮತ್ತು ಎನ್ ಪಿಆರ್ ಅನಗತ್ಯ ಮತ್ತು ಇದೊಂದು ವ್ಯರ್ಥ ಕಸರತ್ತು ಎಂದು ಆಕ್ರೋಶ ವ್ಯಕ್ತಪಡಿಸಿರುವ ನಿವೃತ್ತ ಅಧಿಕಾರಿಗಳು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆಗೆ ಸಂಬಂಧಿಸಿದ ಪೌರತ್ವ ಕಾಯ್ದೆ , 1955ರ ಸೆಕ್ಷನ್ ಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ಸಹ ನಾಗರಿಕರನ್ನು ನಿವೃತ್ತ ಅಧಿಕಾರಿಗಳು ಒತ್ತಾಯಿಸಿದ್ದಾರೆ.
"ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿತ್ತು. ಆದರೆ ಅನಗತ್ಯ ಕಾನೂನುಗಳನ್ನು ತರುವ ಮೂಲಕ ನಾಗರಿಕರು ಮತ್ತು ಸರ್ಕಾರ ರಸ್ತೆಗಳಲ್ಲಿ ಮುಖಾಮುಖಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ದೆಹಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಸಂಪುಟ ಕಾರ್ಯದರ್ಶಿ ಕೆಎಂ ಚಂದ್ರಶೇಖರ್ ಮತ್ತು ಮಾಜಿ ಮಾಹಿತಿ ಆಯುಕ್ತ ವಜಾಹತ್ ಹಬಿಬುಲ್ಲಾ ಸೇರಿದಂತೆ ಸುಮಾರು 100 ನಿವೃತ್ತ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
Advertisement