ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಆಟವಾಡುತ್ತಿದ್ದು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಿದ್ದೇಕೆ ಎಂದು ಪಾಕಿಸ್ತಾನ ಉತ್ತರ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಇರುವುದು ಪೌರತ್ವ ನೀಡುವುದಕ್ಕೆ, ಈಗಿರುವ ಭಾರತೀಯ ನಾಗರಿಕರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕೆ ಅಲ್ಲ, ಇದನ್ನು ನೀವೆಲ್ಲರೂ ಸರಿಯಾಗಿ ಅರ್ಥಮಾಡಿಕೊಳ್ಳಿ. ಆದರೆ ರಾಜಕೀಯ ಆಟ ಆಡುತ್ತಿರುವವರು ಉದ್ದೇಶಪೂರ್ವಕವಾಗಿ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಜನರನ್ನು ಈ ವಿಚಾರದಲ್ಲಿ ಹಾದಿ ತಪ್ಪಿಸಲಾಗುತ್ತದೆ ಎಂದು ಕೋಲ್ಕತ್ತಾದ ಬೇಲೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗುತ್ತಿರುವ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಪರವಾಗಿ ಭಾರತದ ಯುವಜನತೆ ಧ್ವನಿಯೆತ್ತುತ್ತಿದ್ದಾರೆ. ಈ ವಿಷಯವನ್ನು ಎತ್ತದಿದ್ದರೆ ಜಗತ್ತಿಗೆ ಗೊತ್ತೇ ಆಗುವುದಿಲ್ಲ. ಇದು ನಮ್ಮ ಆರಂಭದಿಂದ ಆಗಿದ್ದು ಕಳೆದ 70 ವರ್ಷಗಳಿಂದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಏಕೆ ದೌರ್ಜನ್ಯವೆಸಗುತ್ತಿದೆ ಎಂದು ಪಾಕಿಸ್ತಾನ ಉತ್ತರ ನೀಡಬೇಕಾದ ಸಮಯ ಬಂದಿದೆ ಎಂದರು.
ಯಾರಿಗೆಲ್ಲ ಭಾರತದ ಮೇಲೆ ನಂಬಿಕೆಯಿದೆ ಮತ್ತು ಸಂವಿಧಾನವನ್ನು ನಂಬುತ್ತಾರೆಯೋ ಅವರು ಭಾರತದ ಪ್ರಜೆಗಳಾಗಬಹುದು ಎಂದರು, ಇನ್ನು ಈಶಾನ್ಯ ಭಾಗದವರ ಗುರುತು, ಸಂಸ್ಕೃತಿ ಮತ್ತು ಜನಸಂಖ್ಯೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈಶಾನ್ಯ ಭಾಗ ಭಾರತದ ಹೆಮ್ಮೆ. ಅವರ ಮೇಲೆ ಸಿಎಎ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement