ಭೂಪಾಲ್ : ಇನ್ನೂ ನಾಲ್ಕು ತಿಂಗಳೊಳಗೆ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಪರವಾದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್ ಪರ ವಕೀಲ ಹಾಗೂ ರಾಜಕಾರಣಿ ಕಪಿಲ್ ಸಿಬಲ್ ಹೇಳುತ್ತಾರೆ. ಆದರೆ, ರಾಮನ ಜನ್ಮಭೂಮಿಯಲ್ಲಿ ಇನ್ನೂ ನಾಲ್ಕು ತಿಂಗಳೊಳಗೆ ಆಗಸದೆತ್ತರದ ರಾಮ ಮಂದಿರ ನಿರ್ಮಾಣವಾಗಲಿದೆ ಎಂದರು.
ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲ ಯುವಕರು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಆದರೆ, ಅವರನ್ನು ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್ ರಕ್ಷಿಸಲು ಬಯಸುತ್ತಿದ್ದಾರೆ. ಏಕೆ ಅವರನ್ನು ರಕ್ಷಿಸಲು ಬಯಸುತ್ತಿದ್ದಾರೆ? ಅವರು ರಾಹುಲ್ ಹಾಗೂ ಕ್ರೇಜಿವಾಲ್ ಅವರ ಸಂಬಂಧಿಕರೇ? ಎಂದು ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ರಾಹುಲ್ ಗಾಂಧಿ, ಕೇಜ್ರಿವಾಲ್ ಹಾಗೂ ಮಮತಾ ಬ್ಯಾನಕ್ಜಿ ಅಲ್ಪಸಂಖ್ಯಾತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳು, ಸಿಖ್ಖರು, ಬೌದ್ದರು, ಪಾರ್ಸಿಗಳು, ಜೈನರು ಹಾಗೂ ಕ್ರಿಶ್ಚಿಯನ್ನರಿಗೆ ಈ ಕಾಯ್ದೆಯಿಂದ ಪೌರತ್ವ ದೊರೆಯಲಿದೆ ಎಂದರು.
ಇದೇ ವೇಳೆ ಅಮಿತ್ ಶಾ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸಲು ಮುಂದಾದ 50 ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ವಿದ್ಯಾರ್ಥಿಗಳನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು ಎಂದು ಜಬಲ್ಫುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ.
Advertisement