ಕೋಲ್ಕತಾ: ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ನಾಯಿಗಳಂತೆ ಸುಟ್ಟು ಹಾಕಬೇಕು ಎಂಬ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರ ಹೇಳಿಕೆ ಕೇವಲ ವೈಯುಕ್ತಿಕವಾದದ್ದು. ಈ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಮತ್ತು ಖ್ಯಾತ ಗಾಯಕ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಿಂಸಾಚಾರ ನಿರತ ಪ್ರತಿಭಟನಾಕಾರರನ್ನು ನಾಯಿಗೆ ಹೊಡೆದಂತೆ ಹೊಡೆದುಹಾಕಲಾಯಿತು. ಅಂಥ ಕ್ರಮವನ್ನು ದೀದಿ ಬಂಗಾಳದಲ್ಲೂ ತೆಗೆದುಕೊಳ್ಳಬೇಕಿತ್ತು ಎಂದು ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಹೇಳಿಕೆ ನೀಡಿದ್ದರು. ಇದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತಮ್ಮದೇ ಪಕ್ಷದ ನಾಯಕನ ಹೇಳಿಕೆಯನ್ನು ಬಾಬುಲ್ ಸುಪ್ರಿಯೋ ವಿರೋಧಿಸಿದ್ದಾರೆ.
ದಿಲೀಪ್ ಘೋಷ್ ಅವರ ಹೇಳಿಕೆಯನ್ನು ಬೇಜವಾಬ್ದಾರಿಯುತ ಹೇಳಿಕೆ ಎಂದು ಹೇಳಿರುವ ಸುಪ್ರೀಯೋ, ದಿಲೀಪ್ ಘೋಷ್ ಅವರ ಹೇಳಿಕೆ ಕೇವಲ ವೈಯುಕ್ತಿಕವಾದದ್ದು. ಈ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
'ದಿಲೀಪ್ ಅವರು ಆ ರೀತಿ ಹೇಳಿದ್ದು ಬೇಜವಾಬ್ದಾರಿ ತನದಿಂದ ಕೂಡಿದೆ. ಅವರದ್ದು ಕಪೋಲಕಲ್ಪಿತ ಹೇಳಿಕೆ. ಅವರ ಹೇಳಿಕೆಗೂ ಪಕ್ಷದ ಅಭಿಪ್ರಾಯಕ್ಕೂ ಸಂಬಂಧ ಇಲ್ಲ. ಉತ್ತರ ಪ್ರದೇಶ, ಅಸ್ಸಾಂನಲ್ಲಿರುವ ಬಿಜೆಪಿ ಸರ್ಕಾರಗಳು ಜನರ ಮೇಲೆ ಗುಂಡಿನ ದಾಳಿ ಮಾಡಲು ಯಾವತ್ತೂ ಪ್ರಯತ್ನಿಸಿಲ್ಲ. ಅಂತಹ ಕಾರ್ಯಕ್ಕೆ ಕೈ ಹಾಕುವುದೂ ಇಲ್ಲ' ಎಂದು ಬಾಬುಲ್ ಸುಪ್ರಿಯೋ ಹೇಳಿದ್ಧಾರೆ.
ಇದೇ ವೇಳೆ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡಿದ ಪ್ರತಿಭಟನಾಕಾರರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಬಂಗಾಳ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಯೋ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದರೂ ದೀದಿ ಸರ್ಕಾರ ಅವರ ವಿರುದ್ಧ ಮೃದು ಧೋರಣೆ ತಳೆದಿದೆ. ಈ ವರೆಗೂ ಒಂದೇ ಒಂದು ಎಫ್ ಆರ್ ದಾಖಲಾಗಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಮಾಡಿದವರ ವಿರುದ್ಧ ಉತ್ತರ ಪ್ರದೇಶದಲ್ಲಿ ಕೈಗೊಂಡಂತಹ ಮಾರ್ಗಗಳನ್ನು ಅನುಸರಿಸಬೇಕು. ಕರ್ನಾಟಕ ಅಸ್ಸಾಂನಲ್ಲೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, ಅದು ಅವರ ಅಪ್ಪಂದಿರ ಆಸ್ತಿಯಲ್ಲವಲ್ಲ. ಹೀಗಾಗಿ ನಾಶ ಮಾಡಿದ್ದಾರೆ ಎಂದು ಸುಪ್ರಿಯೋ ಆಕ್ರೋಶ ವ್ಯಕ್ತಪಡಿಸಿದರು.
Advertisement