ಹೌರಾ:ತಮ್ಮ ವಿವಾದಾತ್ಮಕ ಹೇಳಿಕೆಗೆ ಹೆಸರಾಗಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಇದೀಗ ಮತ್ತೊಮ್ಮೆ ತಮ್ಮ ಮಾತನ್ನು ಬೇಕಾಬಿಟ್ಟಿಯಾಗಿ ಹರಿಬಿಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಬುದ್ಧಿಜೀವಿಗಳು ಬೆನ್ನುಮೂಳೆಯಿಲ್ಲದವರು, ದೆವ್ವಗಳು ಮತ್ತು ಬೇರೊಬ್ಬರನ್ನು ನಂಬಿಕೊಂಡು ಜೀವನ ನಡೆಸುವವರು ಎಂದು ನಿನ್ನೆ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ.
ದಿಲೀಪ್ ಘೋಷ್ ಅವರನ್ನು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರನ್ನಾಗಿ ಮತ್ತೊಮ್ಮೆ ಪುನರಾಯ್ಕೆ ಮಾಡಲಾಗಿದ್ದು 2023ರವರೆಗೆ ಅವರೇ ಅಧ್ಯಕ್ಷರಾಗಿರುತ್ತಾರೆ.
ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ರಾಜ್ಯದಿಂದ ಒಂದೇ ಒಂದು ಸ್ಥಾನವನ್ನು ಕೂಡ ಗೆಲ್ಲುವುದಿಲ್ಲ ಎಂದಿದ್ದಾರೆ.
ಚುನಾವಣೆ ಸಮಯದಲ್ಲಿ ನಾವು ಎಲ್ಲಾ 42 ಸೀಟುಗಳನ್ನು ಗೆಲ್ಲುತ್ತೇವೆ, ಬಿಜೆಪಿ ಶೂನ್ಯ ಸೀಟುಗಳನ್ನು ಗೆಲ್ಲಲಿದೆ ಎಂದು ಮಮತಾ ಬ್ಯಾನರ್ಜಿಯವರು ಹೇಳಿದ್ದರು. ಆದರೆ ಫಲಿತಾಂಶ ಬಂದ ಮೇಲೆ ಟಿಎಂಸಿ ರಾಜ್ಯದಿಂದ ಗೆದ್ದಿದ್ದು 22, 2014ರ ಲೋಕಸಭಾ ಚುನಾವಣೆಯಲ್ಲಿ 34 ಸೀಟುಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 2ರಿಂದ 18 ಸ್ಥಾನಗಳಿಗೆ ಏರಿಕೆಯಾಗಿದೆ. 2024ರ ಹೊತ್ತಿಗೆ ದೆಹಲಿಯಲ್ಲಿ ಟಿಎಂಸಿ ನಾಯಕರು ಯಾರೂ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.
Advertisement