ಮುಂಬೈ: ಕೇರಳ, ಪಂಜಾಬ್ ನಂತರ ಇದೀಗ ಮಹಾರಾಷ್ಟ್ರ ಸದನದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಅಂಗೀಕರಿಸಲು ಮಹಾ ವಿಕಾಸ್ ಅಘಾದಿ ಸರ್ಕಾರ ಚಿಂತನೆ ನಡೆಸಿದೆ
ಸಿಎಎ ವಿಚಾರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಬಾಳಾ ಸಾಹೇಬ್ ಥೋರಾಟ್ ಇದೇ ನಿಲುವು ಹೊಂದಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡಾ ಸಿಎಎ ವಿರುದ್ಧವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಎ ವಿರೋಧಿಸಿ ನಿರ್ಣಯ ಅಂಗೀಕರಿಸಲು ಯೋಚಿಸಲಾಗುತ್ತಿದೆ. ಈ ಕುರಿತು ಮಹಾ ವಿಕಾಸ್ ಅಘಾದಿಯ ಹಿರಿಯ ನಾಯಕರು ಕುಳಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಾಜು ವಾಗ್ಮೇರ್ ತಿಳಿಸಿದ್ದಾರೆ.
ಒಂದು ವೇಳೆ ಇದೇನಾದರೂ ಆದಲ್ಲಿ ಸಿಎಎ ವಿರೋಧಿಸಿ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೂರನೇ ರಾಜ್ಯವಾಗಲಿದೆ.
ಸಿಎಎ ಅಸಂವಿಧಾನಿಕವಾದದ್ದು ಎಂದಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಸಿಎಎ ಅನುಷ್ಠಾನಗೊಳಿಸಲ್ಲ ಎಂದು ಯಾವ ರಾಜ್ಯವೂ ಹೇಳುವಂತಿಲ್ಲ. ಆದರೆ, ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಅಂಗೀಕರಿಸುವುದಕ್ಕೆ ಎಲ್ಲಾ ವಿಧಾನಸಭೆಗಳು ಸಾಂವಿಧಾನಿಕ ಹಕ್ಕನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಸಿಎಎ ವಿರೋಧಿಸಿ ನಿರ್ಣಯ ಅಂಗೀಕರಿಸಿರುವ ಕೇರಳ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದಲ್ಲಿ ಕೇರಳದಂತೆ ನಾವು ಕೂಡಾ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
Advertisement