ಶಿರಡಿ: ಶಿರಡಿ ಸಾಯಿಬಾಬಾ ಜನ್ಮ ಸ್ಥಳ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನಡೆಸುತ್ತಿರುವ ಶಿರಡಿ ಬಂದ್ ಹೊರತಾಗಿಯೂ ಸಾಯಿಬಾಬಾ ದೇಗುಲ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿರುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರ್ಬಾನಿಯ ಪಾತ್ರಿಯನ್ನು ಸಾಯಿ ಬಾಬಾ ಜನ್ಮಸ್ಥಳ ಎಂದಿದ್ದಲ್ಲದೆ, ಇದರ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿದ್ದರು. ಇದು ಶಿರಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಾಯಿ ಬಾಬಾ ಸಮಾಧಿಯ ಆಡಳಿತ ಮಂಡಳಿ ಅನಿರ್ಧಿಷ್ಟಾವಧಿಗೆ ಶಿರಡಿ ದೇವಸ್ಥಾನವನ್ನು ಮುಚ್ಚಲು ನಿರ್ಧರಿಸಿತ್ತು.
ಈ ಕುರಿತಂತೆ ಮಾತನಾಡಿರುವ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಬಿ ವಾಕ್ಚೌರೆ ಅವರು, 'ಜನವರಿ 19ರಿಂದ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವು ಶಿರಡಿ ಮುಚ್ಚುವ ನಿರ್ಧಾರವನ್ನು ಘೋಷಿಸಿದ್ದೇವೆ. ಭಕ್ತರು ಶಿರಡಿಗೆ ಬಂದರೆ ಅವರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಪಾತ್ರಿ ಸಾಯಿಬಾಬಾ ಅವರ ಜನ್ಮಸ್ಥಳ ಎಂದಿರುವ ಠಾಕ್ರೆ ಹೇಳಿಕೆ ಬಗ್ಗೆ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಸಾಯಿಬಾಬಾ ಅವರ ಜನ್ಮಸ್ಥಳದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಶಿರಡಿಯಲ್ಲಿ ಇದ್ದಷ್ಟು ದಿನ ಸಾಯಿಬಾಬಾ ತಮ್ಮ ಜನ್ಮಸ್ಥಳ ಅಥವಾ ತಮ್ಮ ಧರ್ಮದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಅದಾಗ್ಯೂ ಉದ್ಧವ್ ಠಾಕ್ರೆ ಅವರ ಹೇಳಿಕೆ ಅಸಾಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ಬಂದ್ ಘೋಷಣೆ ಮಾಡಿದ್ದು, ಸಾಯಿ ಪ್ರಸಾದಾಲಯ, ಸಾಯಿ ಆಸ್ಪತ್ರೆ, ಸಾಯಿ ಭಕ್ತನಿವಾಸ ಮತ್ತು ಸ್ಥಳೀಯ ಮೆಡಿಕಲ್ ಶಾಪ್ಗಳನ್ನು ಬಂದ್ನಿಂದ ಹೊರಗಿಡಲಾಗಿದೆ. ಬಸ್ ಸಂಚಾರ ಮತ್ತು ಹೊಟೇಲ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
Advertisement