ತೀವ್ರ ಪ್ರತಿಭಟನೆಯ ನಡುವೆಯೇ ವಿಧಾನಸಭೆಯಲ್ಲಿ 'ಆಂಧ್ರಕ್ಕೆ ಮೂರು ರಾಜಧಾನಿ' ಮಸೂದೆ ಮಂಡನೆ

ತೀವ್ರ ವಿರೋಧ ಹಾಗೂ ಪ್ರತಿಭಟನೆಯ ನಡುವೆಯೇ ಆಂಧ್ರ ಪ್ರದೇಶ ಸರ್ಕಾರ, ಆಡಳಿತ ವಿಕೇಂದ್ರಿಕರಣ ಹಾಗೂ ರಾಜ್ಯದ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ.
ಮಸೂದೆ ಮಂಡನೆ
ಮಸೂದೆ ಮಂಡನೆ

ವಿಜಯವಾಡ: ತೀವ್ರ ವಿರೋಧ ಹಾಗೂ ಪ್ರತಿಭಟನೆಯ ನಡುವೆಯೇ ಆಂಧ್ರ ಪ್ರದೇಶ ಸರ್ಕಾರ, ಆಡಳಿತ ವಿಕೇಂದ್ರಿಕರಣ ಹಾಗೂ ರಾಜ್ಯದ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ವಿಕೇಂದ್ರೀಕರಣದ ನಿಜವಾದ ಪರಿಕಲ್ಪನೆಯ ಭಾಗವಾಗಿ ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹೊಂದುವ ಎಪಿ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2014ಯನ್ನು ಆಂಧ್ರ ಪ್ರದೇಶ ಹಣಕಾಸು ಸಚಿವ ಬುಗ್ಗನ್ ರಾಜೇಂದ್ರನಾಥ್ ರೆಡ್ಡಿ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.

ರಾಜ್ಯ ವಿಭಜನೆಯಾದಾಗ, ಎಪಿ ಪುನರಚನೆ ಕಾಯ್ದೆ ಅಡಿ ನೇಮಕೊಂಡಿದ್ದ ಕೆಎಸ್ ಶಿವರಾಮಕೃಷ್ಣನ್ ಸಮಿತಿಯ ಶಿಫಾರಸುಗಳನ್ನು ಪರಿಗಣಿಸದೆ ರಾಜಧಾನಿಯನ್ನು ನಿರ್ಧರಿಸಲಾಗಿತ್ತು ಎಂದು ರಾಜೇಂದ್ರನಾಥ್ ರೆಡ್ಡಿ ಅವರು ತಿಳಿಸಿದರು. ಈಗ ಇತರೆ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ವಿಕೇಂದ್ರಿಕರಣ ಮಾಡಲಾಗುತ್ತಿದೆ ಎಂದರು.

ವಿವಿಧ ಸಮಿತಿಗಳು ನೀಡಿದ ವರದಿಗಳನ್ನು ಪರಿಶೀಲಿಸಿದ ಬಳಿಕ ಸಮಾನ ಮತ್ತು ವಿಕೇಂದ್ರೀಕೃತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಈ ಮಸೂದೆ ಮಂಡಿಸಲಾಗಿದೆ ಎಂದು ರಾಜೇಂದ್ರನಾಥ್ ರೆಡ್ಡಿ ಹೇಳಿದರು.

ಈ ಮಸೂದೆ ಪ್ರಕಾರ ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ, ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯನ್ನಾಗಿ ಹಾಗೂ ಕರ್ನೂಲ್‌ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ರಾಜ್ಯವನ್ನು ವಿವಿಧ ವಲಯಗಳನ್ನಾಗಿ ವಿಭಾಗಿಸುವುದು, ವಲಯ ಅಭಿವೃದ್ಧಿ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಗಳ ಸ್ಥಾಪನೆ ಬಗ್ಗೆಯೂ ಮಸೂದೆಯಲ್ಲಿ ವಿವರಿಸಲಾಗಿದೆ.

ಅಧಿವೇಶನಕ್ಕೂ ಮುನ್ನ ಜಗನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕರಡು ಮಸೂದೆ ಅಂಗೀಕಾರಗೊಂಡಿತು. ಜೊತೆಗೆ ರಾಜಧಾನಿಗೆ ಸಂಬಂಧಿಸಿದಂತೆ ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿಯ ಶಿಫಾರಸುಗಳಿಗೂ ಸಂಪುಟ ಸಮ್ಮತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com