ಚೆನ್ನೈ:ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಬಜೆಟ್ ಮಂಡನೆಯ ಕುರಿತು ಚರ್ಚೆ ನಡೆಸಲು ಕಳೆದ ಜನವರಿ 9ರಂದು ದೆಹಲಿಯ ನೀತಿ ಆಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಆರ್ಥಿಕ ತಜ್ಞರು, ಅಧಿಕಾರಿಗಳು, ಉದ್ಯಮಿಗಳ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸದೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಇದಕ್ಕೀಗ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಉತ್ತರ ಕೊಡುವ ಮೂಲಕ ಟೀಕೆಗಳಿಗೆ ತೆರೆ ಎಳೆದಿದ್ದಾರೆ. ''ಪ್ರಧಾನಿಯವರ ಒಪ್ಪಿಗೆ ಪಡೆದು ಬೇರೊಂದು ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಆದರೆ ವಾಸ್ತವ ಏನು ಎಂದು ತಿಳಿದುಕೊಳ್ಳದೆ ಕೆಲವರು ಸುಮ್ಮನೆ ಟೀಕೆ ಮಾಡುತ್ತಾರೆ. ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್ ಗೆ ಏನು ಮಾಡಬೇಕು, ಹೇಗೆ ಸಿದ್ದತೆ ನಡೆಸಿಕೊಳ್ಳಬೇಕೆಂದು ನನಗೆ ಗೊತ್ತಿದೆ. ನನ್ನ ಕೆಲಸಗಳೇನು, ಜವಾಬ್ದಾರಿಗಳೇನು ಎಂಬುದನ್ನು ಬೇರೆಯವರಿಂದ ಕಲಿತುಕೊಳ್ಳಬೇಕಾಗಿಲ್ಲ'' ಎಂದಿದ್ದಾರೆ.
ಇನ್ನು ನಿರ್ಮಲಾ ಸೀತಾರಾಮನ್ ಅವರು ಪ್ರತಿ ಶುಕ್ರವಾರ ಬಜೆಟ್ ಘೋಷಿಸುತ್ತಾರೆ ಎಂಬ ಹೇಳಿಕೆಗೆ ಅಂತಹ ಟೀಕೆಗಳನ್ನೆಲ್ಲ ಹಗುರವಾಗಿ ತೆಗೆದುಕೊಳ್ಳುತ್ತೇನೆ, ಅಂತವುಗಳನ್ನು ಕೇಳಿದಾಗ ಮನಸ್ಸಿಗೆ ನಿರಾಳವಾಗುತ್ತದೆ, ಒಳ್ಳೆಯ ಮನರಂಜನೆ ಸಿಗುತ್ತದೆ ಎಂದರು.
ಕೆಲವು ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ಹೇಳುತ್ತಿರುವುದು ಅಸಂವಿಧಾನಿಕ, ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾಯ್ದೆಯಾಗಿ ಜಾರಿಗೆ ಬಂದಿರುವುದನ್ನು ತರುವುದು ಎಲ್ಲಾ ರಾಜ್ಯಗಳ ಜವಾಬ್ದಾರಿಯಾಗಿರುತ್ತದೆ. ಸಿಎಎ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಹೊರಡಿಸುವುದು ತಪ್ಪಲ್ಲ, ಅದು ರಾಜಕೀಯ ಹೇಳಿಕೆಯಂತೆ. ನಮಗೆ ಅರ್ಥವಾಗುತ್ತದೆ. ಆದರೆ ನಾವು ಜಾರಿಗೆ ತರುವುದಿಲ್ಲ ಎಂದು ಹೇಳುವುದು ಕಾನೂನಿಗೆ ವಿರುದ್ಧ ಮತ್ತು ಅಸಂವಿಧಾನಿಕ ನಡೆ ಕೂಡ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು.
Advertisement