ತಿರುವನಂತಪುರಂ:ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್ ) ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲು ಸಿಪಿಎಂ ನಿರ್ಧರಿಸಿದೆ.
ಭಾನುವಾರ ಇಲ್ಲಿ ಮುಕ್ತಾಯಗೊಂಡು ಪಕ್ಷದ ಮೂರು ದಿನಗಳ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಿಳಿಸಿದರು.
ಸರ್ಕಾರದ ಲೆಕ್ಕಾಚಾರದ ಸಮಯದಲ್ಲಿ ಎನ್ಪಿಆರ್ ಪ್ರಶ್ನೆಗಳಿಗೆ ಉತ್ತರಿಸದಂತೆ ಆದರೆ ಜನಗಣತಿಯ ಪ್ರಶ್ನೆಗಳಿಗೆ ಉತ್ತರಿಸುವಂತೆ ಜನತೆಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.
ಮುಸ್ಲಿಂರು, ವಸತಿ ಹೀನರು, ದಲಿತರು, ಪರಿಶಿಷ್ಟ ಪಂಗಡ ಸೇರಿದಂತೆ ಲಕ್ಷಾಂತರ ಬಡ ಜನರ ಮೇಲೆ ಎನ್ ಪಿಆರ್ ಹಾಗೂ ಎನ್ ಆರ್ ಸಿ ಪರಿಣಾಮ ಬೀರುವುದನ್ನು ಕೇಂದ್ರ ಸಮಿತಿ ಗಮನಿಸಿದೆ. ಹಲವರು ತಮ್ಮ ಹೆಸರನ್ನು ಎನ್ಆರ್ಸಿಯಲ್ಲಿ ನಮೂದಿಸಲು ದಾಖಲೆಗಳನ್ನು ತಯಾರಿಸುವುದು ಅಸಾಧ್ಯವಾಗಿದೆ. ಮಾರ್ಚ್ 23 ರಂದು ಮನೆ ಮನೆ ಪ್ರಚಾರ ಮುಕ್ತಾಯವಾಗಲಿದೆ ಎಂದು ಯೆಚೂರಿ ತಿಳಿಸಿದರು.
ಎನ್ ಆರ್ ಸಿ ಕೇಂದ್ರದ ಮುಸ್ಲಿಂ ವಿರೋಧಿ ನೀತಿಯಾಗಿದೆ. ಬಂಧನ ಕೇಂದ್ರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿದ ನಿರ್ದೇಶನವನ್ನು ಹಿಂತೆಗೆದುಕೊಳ್ಳಬೇಕು, ಅಸ್ಸಾಂನಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರಗಳನ್ನು ನಾಶಪಡಿಸಬೇಕು ಮತ್ತು ಅಂತಹ ಕೇಂದ್ರಗಳನ್ನು ನಿರ್ಮಿಸದಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಬೇಕು ಎಂಬುದು ಕೇಂದ್ರ ಸಮಿತಿಯ ಒತ್ತಾಯವಾಗಿದೆ ಎಂದರು.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪರಿಸ್ಥಿತಿಯನ್ನು ಪುನರ್ ಸ್ಥಾಪಿಸಲು ಸಂವಹನ ಮತ್ತು ಸಾರಿಗೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು, ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.
Advertisement