ನವದೆಹಲಿ: ದೇಶ ಬಿಟ್ಟು 'ಕೈಲಾಸ'ಕ್ಕೆ ಪರಾರಿಯಾಗಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಗುಜರಾತ್ನ ಅಹಮದಾಬಾದ್ ನಲ್ಲಿರುವ ಯೋಗಿನಿ ಸರ್ವಜ್ಞ ಪೀಠಂ ಆಶ್ರಮದಲ್ಲಿನ ನಾಲ್ಕು ವಿದ್ಯಾರ್ಥಿಗಳ ಅಪಹರಣ ಹಾಗೂ ಅವರನ್ನು ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೇ ವಿಚಾರವಾಗಿ ಗುಜರಾತ್ ಪೊಲೀಸರು ದೇಶ ಬಿಟ್ಟು ಪರಾರಿಯಾಗಿರುವ ನಿತ್ಯಾನಂದನಿಗೆ ನೋಟಿಸ್ ಜಾರಿ ಮಾಡುವಂತೆ ಮನವಿ ಮಾಡಿದ್ದರು.
ಗುಜರಾತ್ ಪೊಲೀಸರ ಮನವಿಯಂತೆ ಇದೀಗ ಇಂಟರ್ ಪೋಲ್ ನಿತ್ಯಾನಂದ ಸ್ವಾಮಿಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಸಾಮಾನ್ಯವಾಗಿ ಈ ಬ್ಲೂ ಕಾರ್ನರ್ ನೋಟಿಸ್ ಅನ್ನು ನಾಪತ್ತೆಯಾದ, ಗುರುತು ಪತ್ತೆಯಾದ ಅಥವಾ ಪತ್ತೆಯಾಗದ ಅಪರಾಧಿಗಳು ಮತ್ತು ಸಾಮಾನ್ಯ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿರುವ ಅಪರಾಧಿಗಳ ವಿರುದ್ಧ ಹೊರಡಿಸಲಾಗುತ್ತದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅಹ್ಮದಾಬಾದ್ ಪೊಲೀಸರು, ನಿತ್ಯಾನಂದ ಸ್ವಾಮಿ ಬೆಂಗಳೂರಿಗೆ ಬಾರದೆ ಅನೇಕ ವರ್ಷಗಳಾಗಿವೆ. ಆತನ ಮೇಲೆ ರಂಜಿತಾ ಸೇರಿದಂತೆ ಇನ್ನೂ ಕೆಲವು ಶಿಷ್ಯರು ಅತ್ಯಾಚಾರದ ಆರೋಪ ಮಾಡಿದ ನಂತರ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಭಾರತದಲ್ಲಿ ಹುಡುಕುವುದು ವ್ಯರ್ಥ. ಮುಂದಿನ ದಿನಗಳಲ್ಲಿ ಇಂಟರ್ ಪೋಲ್ ಗೆ ಈ ಕುರಿತು ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
Advertisement