ನವದೆಹಲಿ: ಹಾಂಗ್ ಕಾಂಗ್ ಸೇರಿದಂತೆ ಚೀನಾದಿಂದ ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿನ್ ಮೂಲಕ ಭಾರತಕ್ಕೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಆರಂಭಿಸಲಾಗಿದೆ. ವಿಶೇಷವಾಗಿ ದೇಹದ ಉಷ್ಣಾಂಶವನ್ನು ಪರಿಶೀಲಿಸಿ ವುಹಾನ್ ವೈರಸ್ನ ಸೋಂಕು ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಇದಕ್ಕೂ ಮೊದಲು ದೆಹಲಿ, ಮುಂಬೈ ಮತ್ತು ಕೊಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಈ ತಪಾಸಣೆಯನ್ನು ಕೈಗೊಳ್ಳಲಾಗುತ್ತಿತ್ತು. ಇದೀಗ ಇತರ ವಿಮಾನ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.
ಚೀನಾದ ಹುಬೈ ಪ್ರಾಂತ್ಯದ ವುಹಾನ್ನಲ್ಲಿರುವ ‘ನೊವೆಲ್ ಕರೋನಾ ವೈರಸ್ ಕಾಯಿಲೆ (ಎನ್ಸಿಒವಿ)’ಯ ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಕೇಂದ್ರ, ಆರೋಗ್ಯ ಸೇವೆಗಳ ನಿರ್ದೇಶನಾಲಯದ ಸಲಹೆಯಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಚೀನಾದ್ಯಂತ ವುಹಾನ್ ವೈರಸ್ ಸೋಂಕು 440ಕ್ಕೂ ಹೆಚ್ಚು ಜನರಿಗೆ ತಗುಲಿದ್ದು ದೃಢಪಟ್ಟಿದ್ದು ಹಾಂಗ್ ಕಾಂಗ್, ಬೀಜಿಂಗ್, ಶಾಂಗೈ ಮತ್ತು ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಅನೇಕರಲ್ಲಿ ಕಾಣಿಸಿಕೊಂಡಿದೆ.ಇಂದು ಬೆಳಗ್ಗೆಯ ಹೊತ್ತಿಗೆ ಸಾವಿನ ಸಂಖ್ಯೆ 9ಕ್ಕೇರಿದೆ.
Advertisement