ಪಾಟ್ನಾ: ದೆಹಲಿ ವಿಧಾನಸಭೆ ಚುನಾವಣೆಗೆ ಸಂಯುಕ್ತ ಜನತಾದಳ(ಜೆಡಿ(ಯು)) ಬಿಜೆಪಿ ಜೊತೆ ಕೈಜೋಡಿಸಿರುವುದನ್ನು ಬಹಿರಂಗವಾಗಿ ಪ್ರಶ್ನೆ ಮಾಡಿರುವ ಪಕ್ಷದ ನಾಯಕ ಪವನ್ ಮರ್ಮಾ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಪವನ್ ವರ್ಮಾ ಅವರು ಜೆಡಿ(ಯು) ಬಿಟ್ಟು ಯಾವ ಪಕ್ಷಕ್ಕೆ ಹೋಗಲು ಕೂಡ ಮುಕ್ತವಾಗಿದ್ದಾರೆ ಎಂದಿದ್ದಾರೆ.
ಜೆಡಿ(ಯು)ನ ಪ್ರಧಾನ ಕಾರ್ಯದರ್ಶಿಯಾಗಿರುವ ಪವನ್ ವರ್ಮಾ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್, ಅವರೊಬ್ಬ ಅನುಭವಿ ವ್ಯಕ್ತಿ, ಅವರಿಗೆ ನನ್ನ ಬಗ್ಗೆ ಗೌರವ ಇಲ್ಲದಿದ್ದರೂ ನನಗೆ ಅವರ ಮೇಲೆ ಗೌರವವಿದೆ. ಆದರೆ ಇಂತಹ ವೈಯಕ್ತಿಕ ವಿಷಯಗಳನ್ನೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಸಾರ್ವಜನಿಕವಾಗಿ ಹೇಳುವುದು ಸರಿಯೇ? ಅವರು ನನಗೆ ಹೇಳಿದ್ದನ್ನು ನಾನು ಬಹಿರಂಗವಾಗಿ ಮುಕ್ತವಾಗಿ ಹೇಳಿದರೆ ಏನಾಗುತ್ತದೆ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದರು.
ಜೆಡಿ(ಯು) ಮತ್ತು ಬಿಜೆಪಿ ಹೊಂದಾಣಿಕೆ ಬಗ್ಗೆ ತಾತ್ವಿಕ ಸ್ಪಷ್ಟತೆ ನೀಡಿ ಎಂದು ಕೇಳಿದ ಪವನ್ ವರ್ಮಾ ಅವರಿಗೆ ನಿತೀಶ್ ಕುಮಾರ್ ಜೆಡಿ(ಯು)ನ ನಿಲುವು ಸ್ಪಷ್ಟವಾಗಿದೆ. ಅವರಿಗೆ ಬೇಕಾದಲ್ಲಿಗೆ ಅವರು ಹೋಗಬಹುದು ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿಷಯವಾಗಿ ಬಿಜೆಪಿ ವಿರುದ್ಧ ಜೆಡಿ(ಯು) ನಾಯಕ ಪ್ರಶಾಂತ್ ಕಿಶೋರ್ ಅನೇಕ ಬಾರಿ ಟೀಕಿಸಿದ್ದಾರೆ. ಹೀಗಿರುವಾಗ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರ ನಿಲುವೇನು ಎಂದು ಪವನ್ ವರ್ಮಾ ಕೇಳಿದ್ದಾರೆ.
Advertisement