ನವ ದೆಹಲಿ: ಮತದಾರರ ಪಟ್ಟಿಯಲ್ಲಿ ಅನೇಕ ನಮೂದುಗಳನ್ನು ಪರಿಶೀಲಿಸಲು ಮತ್ತು ಹೊಸ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಶಾಸನ ಬೆಂಬಲ ನೀಡುವ ಚುನಾವಣಾ ಆಯೋಗದ ಪ್ರಸ್ತಾಪವನ್ನು ಪರಿಗಣಿಸಿ ಹೊಸ ಕಾನೂನನ್ನು ರಚಿಸುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಸಚಿವಾಲಯ ಕಾರ್ಯೋನ್ಮುಖವಾಗಿದೆ.
ಜನಪ್ರತಿನಿಧಿ ಕಾಯ್ದೆ 1951ಕ್ಕೆ ತಿದ್ದುಪಡಿ ತರುವ ಕಾರ್ಯ ನಡೆಯುತ್ತಿದ್ದು, ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದ ಮುಂದೆ ಮಂಡಿಸುವ ಸಾಧ್ಯತೆ ಇದೆ. ಇದಾದ ನಂತರ ಈ ಸಂಬಂಧಿತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ಮತದಾರರ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ಅಲ್ಲದೇ, ಇದರಿಂದ ಖಾಸಗಿತನವೂ ರಕ್ಷಿಸಿದಂತಾಗುತ್ತದೆ.
ಚುನಾವಣಾ ಆಯೋಗದ ಪ್ರಸ್ತಾಪವನ್ನು ಪರಿಗಣಿಸಿ ಕ್ಯಾಬಿನೆಟ್ ಟಿಪ್ಪಣಿ ಸಿದ್ಧಪಡಿಸುವ ಕಾರ್ಯದಲ್ಲಿ ಸಚಿವಾಲಯ ಬ್ಯುಸಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಕಾನೂನು ಸಚಿವಾಲಯದಿಂದ ಇನ್ನೂ ನಿರ್ಧಾರವಾಗಿಲ್ಲ, ಕ್ಯಾಬಿನೆಟ್ ಮುಂದೆ ಟಿಪ್ಪಣಿ ಮಂಡಿಸಲಾಗುವುದು ಆದರೆ, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆಯೇ? ಅಥವಾ ಅದಕ್ಕೂ ಮುಂಚಿತವಾಗಿ ಮಂಡನೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.
ಜನಪ್ರತಿನಿಧಿ ಕಾಯ್ದೆ 1951ಕ್ಕೆ ತಿದ್ದುಪಡಿ ಮೂಲಕ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಅವಕಾಶಕ್ಕೆ ವಿನಾಯಿತಿ ಪ್ರಸ್ತಾಪವನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕಾನೂನು ಸಚಿವಾಲಯಕ್ಕೆ ಚುನಾವಣಾ ಆಯೋಗ ಬರೆದ ಪತ್ರದಲ್ಲಿ ಪ್ರಸ್ತಾಪಿಸಿತ್ತು.
ಎನ್ ಇಆರ್ ಪಿಇಪಿ ಯೋಜನೆಯಂತೆ ಅರ್ಜಿದಾರರಿಂದ ಆಧಾರ್ ನಂಬರ್ ಸಂಗ್ರಹಿಸುವಂತೆ ಚುನಾವಣಾ ಆಯೋಗ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿತ್ತು. ಮತದಾರರ ನಿಖರವಾದ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಎನ್ ಪಿಆರ್ ಇಪಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಕಾನೂನಿನ ಅನುಮತಿ ಅಗತ್ಯ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 11, 2015 ರ ಆದೇಶವನ್ನು ಅನುಸರಿಸಿ ಮತದಾನ ಸಮಿತಿ ಕಾರ್ಯಕಾರಿಣಿ ಯೋಜನೆಯನ್ನು ನಿಲ್ಲಿಸಬೇಕಾಯಿತು. ಆ ಸಂದರ್ಭದಲ್ಲಿ ಸುಮಾರು 380 ಮಿಲಿಯನ್ ಮತದಾರರಿಗೆ ಅದು ಅನ್ವಯಿಸುತಿತ್ತು. ಪ್ರಸ್ತುತ ದೇಶದಲ್ಲಿ 750 ಮಿಲಿಯನ್ ಗೂ ಹೆಚ್ಚು ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ.
Advertisement