ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಹೋಲಿಕೆ ಮಾಡಿ ವಿವಾದಾತ್ಮಕ ಟ್ಟೀಟ್ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಸಹಾಯಕ ಚುನಾವಣಾ ಆಯುಕ್ತರು ಈ ನಿರ್ಬಂಧ ಹೇರಿದ್ದು, ಶನಿವಾರ ಸಂಜೆ 5 ಗಂಟೆಯಿಂದ ಇದು ಜಾರಿಗೆ ಬರಲಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಿಶ್ರಾ ವಿವಾದಾತ್ಮಕ ಟ್ಟೀಟ್ನ್ನು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗ ಟ್ಟಿಟ್ಟರ್ಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಟ್ಟಿಟ್ಟರ್ ಶುಕ್ರವಾರವೇ ಅವರ ಟ್ಟೀಟ್ನ್ನು ಡಿಲೀಟ್ ಮಾಡಿದೆ. ಜನರ ಮಧ್ಯೆ ಸಂಘರ್ಷ ಹುಟ್ಟುಹಾಕಲು ಯತ್ನಿಸಿದ್ದಕ್ಕಾಗಿ ಅವರ ಮೇಲೆ ಕೇಸ್ ಸಹ ದಾಖಲಿಸಲಾಗಿದೆ.
ಮಾಡೆಲ್ ಟೌನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಪಿಲ್ ಮಿಶ್ರಾ ಅವರು, “ಪಾಕಿಸ್ತಾನ ಶಾಹಿನ್ ಬಾಗ್ ಮೂಲಕ ಒಳ ಪ್ರವೇಶಿಸುತ್ತಿದೆ. ದೆಹಲಿಯ ಶಾಹಿನ್ ಬಾಗ್, ಚಾಂದ್ ಬಾಗ್, ಇಂದರ್ಲೋಕ್ನಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ. ಕಾನೂನು ಇಲ್ಲಿ ಪಾಲನೆಯಾಗುತ್ತಿಲ್ಲ ಮತ್ತು ಪಾಕಿಸ್ತಾನದ ಗಲಭೆಕೋರರು ರಸ್ತೆಗಳನ್ನು ಆಕ್ರಮಿಸುತ್ತಿದ್ದಾರೆ” ಎಂದು ಕಪಿಲ್ ಮಿಶ್ರಾ ಹಿಂದಿಯಲ್ಲಿ ಟ್ಟೀಟ್ ಮಾಡಿದ್ದರು.
ಮತ್ತೊಂದ್ ಟ್ವೀಟ್ನಲ್ಲಿ ದೆಹಲಿ ವಿಧಾನಸಭೆ ಚುನಾವಣೆಯನ್ನು ಭಾರತ - ಪಾಕಿಸ್ತಾನ ಸಂಘರ್ಷಕ್ಕೆ ಹೋಲಿಸಿದ್ದರು. ಈ ಟ್ಟೀಟ್ಗಳ ಸಂಬಂಧ ಅವರಿಗೆ ನೋಟಿಸ್ ನೀಡಲಾಗಿದೆ.
Advertisement