ನವದೆಹಲಿ; ಸಂವಿಧಾನದ ಮೇಲೆ ಪಿತೂರಿ ನಡೆಸಿ ದಾಳಿ ನಡೆಸಲಾಗುತ್ತಿದ್ದು ಅದನ್ನು ರಕ್ಷಿಸಲು ವೈಯಕ್ತಿಕ ಪೂರ್ವಾಗ್ರಹಪೀಡಿತ ಧೋರಣೆಯನ್ನು ಬದಿಗೊತ್ತಿ ಎಲ್ಲರೂ ಒಟ್ಟಾಗಿ ನಿಲ್ಲಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದ ಪ್ರಯುಕ್ತ ನೀಡಿರುವ ಸಂದೇಶದಲ್ಲಿ ಅವರು, ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದ್ದು ದೇಶದ ಏಕತೆಯನ್ನು ಬಲಪಡಿಸಬೇಕೆಂದರು.
ದೇಶದ ಜನರನ್ನು ಧರ್ಮ, ಸ್ಥಳೀಯವಾದ, ಭಾಷೆಯ ಆಧಾರದ ಮೇಲೆ ವಿಭಜಿಸುವ ಪಿತೂರಿ ಆಳವಾಗಿ ಬೇರೂರಿದ್ದು ಅದು ಸಂವಿಧಾನದ ಆಶಯಕ್ಕೆ ಧಕ್ಕೆಯನ್ನುಂಟುಮಾಡುತ್ತಿದೆ. ದೇಶದ ಜನರಲ್ಲಿ ತೊಂದರೆಯ, ಭೀತಿಯ, ಅಭದ್ರತೆಯ ವಾತಾವರಣ ಕಂಡುಬರುತ್ತಿದೆ ಎಂದರು.
ಇಂದಿನ ಆಡಳಿತ ನಾಯಕರ ಕೈಯಲ್ಲಿ ಸಂವಿಧಾನದ ಮೌಲ್ಯಗಳು ಸುರಕ್ಷಿತವಾಗಿ ಉಳಿದಿಲ್ಲ ಎಂಬ ಅಭಿಪ್ರಾಯಕ್ಕೆ ಸಾಮಾನ್ಯ ಜನರು ಬಂದಿದ್ದಾರೆ.ಇಂತಹ ಸಂದರ್ಭದಲ್ಲಿ ವೈಯಕ್ತಿಕ ಪೂರ್ವಾಗ್ರಹ ಮನಸ್ಥಿತಿಯಿಂದ ಹೊರಬಂದು ರಾಜಕೀಯ ಲಾಭವನ್ನು ಲೆಕ್ಕಿಸದೆ ರಾಷ್ಟ್ರ ನಿರ್ಮಾಣದ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.
Advertisement