ಹೈದ್ರಾಬಾದ್: ಸಿಎಎ ವಿರೋಧಿಸಿ ಭಾಷಣ ಮಾಡಲು ತೆರಳುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಅಜಾದ್ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲು ತೆರಳುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಅವರನ್ನು ಹೈದ್ರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್

ಹೈದ್ರಾಬಾದ್ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲು ತೆರಳುತ್ತಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಅವರನ್ನು ಹೈದ್ರಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲು ಅನುಮತಿ ನಿರಾಕರಿಸಿದ ಪೊಲೀಸರು, ಅಜಾದ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿ, ಪ್ರಮುಖ ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಿದರು.

ಅಖಿಲ ಭಾರತ ದಲಿತ ಮುಸ್ಲಿಂ ಆದಿವಾಸಿ ಪ್ರಗತಿಪರರ ವೇದಿಕೆ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಷಣ ಮಾಡಲು ಚಂದ್ರಶೇಖರ್ ಅಜಾದ್ ಮೆಹಂದಿಪಟ್ಟಣಂ ಕಡೆಗೆ ತೆರಳುತ್ತಿದ್ದರು.

ಮೊದಲಿಗೆ ಅಜಾದ್ ಅವರನ್ನು ಹಬೀಬ್ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಗೆ ಧಾವಿಸಿದ ಅಜಾದ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ನಗರದ ಹೊರವಲಯ ಬೊಲಾರಾಮ್ ಠಾಣೆ ನಂತರ ಗೋಶಾಮಹಲ್ ಠಾಣೆಗೆ ಕರೆದೊಯ್ಯಲಾಯಿತು.

ಇದಕ್ಕೂ ಮುಂಚೆ ಪೊಲೀಸರು ಅನೇಕ ಅಜಾದ್ ಬೆಂಬಲಿಗರನ್ನು ವೇದಿಕೆ ಬಳಿ ಬಂಧಿಸಿದ್ದರು. ಇದೇ ವೇದಿಕೆಯಲ್ಲಿ ಜನವರಿ 13ರಂದು ಆಯೋಜಿಸಲಾಗಿದ್ದ ಕನ್ಹಯ್ಯ ಕುಮಾರ್ ಭಾಷಣ ಕಾರ್ಯಕ್ರಮಕ್ಕೂ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. 

ತಿಹಾರ್ ಸೆಂಟ್ರಲ್ ಜೈಲಿನಿಂದ ಜಾಮೀನಿನ ಮೇರೆಗೆ ಹೊರಗೆ ಬಂದ 10 ದಿನಗಳ ನಂತರ ಮತ್ತೆ ಚಂದ್ರಶೇಖರ್ ಅಜಾದ್ ಬಂಧನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com