ಒಂದು ಸಂಸತ್ತು ಇನ್ನೊಂದು ಸಂಸತ್ತಿನ ಮೇಲೆ ನಿರ್ಣಯ ಹೊರಡಿಸುವುದು ಸೂಕ್ತವಲ್ಲ: ಲೋಕಸಭಾಧ್ಯಕ್ಷ ಓಂ ಬಿರ್ಲಾ 

ಭಾರತ ಸರ್ಕಾರದ ಪೌರತ್ವ(ತಿದ್ದುಪಡಿ) ಕಾಯ್ದೆ ವಿರುದ್ಧ ಐರೋಪ್ಯ ಸಂಸತ್ತಿನಲ್ಲಿ ಹೊರಡಿಸಲಾದ ನಿರ್ಣಯಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಓಂ ಬಿರ್ಲಾ
ಓಂ ಬಿರ್ಲಾ

ನವದೆಹಲಿ: ಭಾರತ ಸರ್ಕಾರದ ಪೌರತ್ವ(ತಿದ್ದುಪಡಿ) ಕಾಯ್ದೆ ವಿರುದ್ಧ ಐರೋಪ್ಯ ಸಂಸತ್ತಿನಲ್ಲಿ ಹೊರಡಿಸಲಾದ ನಿರ್ಣಯಕ್ಕೆ ವಿರುದ್ಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ಶಾಸಕಾಂಗ ಹೊರಡಿಸಿದ ಕಾಯ್ದೆ ಬಗ್ಗೆ ಮತ್ತೊಂದು ಶಾಸಕಾಂಗ ತೀರ್ಮಾನ ಹೊರಡಿಸುವುದು ಸರಿಯಲ್ಲ, ಇಂತಹ ಸಂಪ್ರದಾಯಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.


ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯದ ಮೇಲೆ ಐರೋಪ್ಯ ಸಂಸತ್ತು ಸದಸ್ಯರು ಚರ್ಚೆ ನಡೆಸಲು ಮುಂದಾಗಿದ್ದು ಈ ಬಗ್ಗೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಕೂಡ ಪ್ರತಿಕ್ರಿಯೆ ನೀಡಿ ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶಿಸಲು ಹೊರಗಿನವರಿಗೆ ಅವಕಾಶವಿಲ್ಲ, ದೇಶವು ತನ್ನ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.


ಇನ್ನು ಐರೋಪ್ಯ ಸಂಸತ್ತು ಹೊರಡಿಸಿರುವ ನಿರ್ಣಯದ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ತನ್ನದೇ ಆದ ರಾಜಕೀಯ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದೆ. ಐರೋಪ್ಯ ಒಕ್ಕೂಟದ ಸಂಸದರು ಭಾರತದ ವಿಷಯಗಳನ್ನು ಪ್ರಶ್ನೆ ಮಾಡುವ ಔಚಿತ್ಯವೇನು ಎಂದು ಬಿಜೆಪಿ ಪ್ರಶ್ನಿಸಿದರೆ ಕಾಂಗ್ರೆಸ್ ಕೇಸರಿ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂತಾರಾಷ್ಟ್ರೀಯ ಮಟ್ಟದ ವಿಷಯ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.


ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಫ್ರಾನ್ಸ್, ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ರಾಜಕೀಯ ವಿಷಯ ಎಂದು ಪರಿಗಣಿಸಿದೆ ಎಂದು ರಾಯಭಾರಿ ಮೂಲಗಳು ತಿಳಿಸಿವೆ.


751 ಸದಸ್ಯ ಬಲದ ಐರೋಪ್ಯ ಒಕ್ಕೂಟದಲ್ಲಿ ಸುಮಾರು 600 ಸದಸ್ಯರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ 6 ನಿರ್ಣಯಗಳನ್ನು ಹೊರಡಿಸಿದ್ದಾರೆ. ಭಾರತದ ಪೌರತ್ವಕ್ಕೆ ಈ ತಿದ್ದುಪಡಿ ಅಪಾಯಕಾರಿ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಈ ನಿರ್ಣಯದ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೇವಿಡ್ ಮರಿಯಾ ಸಸ್ಸೊಲಿಗೆ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com