ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮೂರು ದಿನಗಳ ಕಾಲ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾ ನಾಲ್ಕು ದಿನಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗವು ನಿರ್ಬಂಧಿಸಿದೆ. ಈ ಇಬ್ಬರೂ ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ನಿರ್ಬಂಧಕ್ಕೆ ಒಳಗಾಗಿದ್ದಾರೆ.
ಶೋಖಾಸ್ ನೋಟೀಸ್ ಗಳಿಗೆ ಬಿಜೆಪಿ ಮುಖಂಡರು ನೀಡಿರುವ ಉತ್ತರದಿಂದ ಚುನಾವಣಾ ಆಯೋಗಕ್ಕೆ ಸಮಾಧಾನವಾಗಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ದೆಹಲಿ ಸಂಸದ ವರ್ಮಾ ಮಂಗಳವಾರ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಆದ ಸ್ಥಿತಿ ನಾಳೆ ದೆಹಲಿಯಲ್ಲಿಯೂ ಸಂಭವಿಸಬಹುದು ಎಂದಿದ್ದಲ್ಲದೆ ಶಹೀನ್ ಬಾಗ್ನಲ್ಲಿ ಸೇರಿರುವ ಲಕ್ಷಾಂತರ ಸಿಎಎ ವಿರೋಧಿ ಪ್ರತಿಭಟನಾಕಾರರು ನಾಳೆ ನಿಮ್ಮ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಅತ್ಯಾಚಾರ ನಡೆಸಿ ಕೊಲ್ಲಲೂಬಹುದು ಎಂದು ಎಚ್ಚರಿಸಿದ್ದರು.
ಚುನಾವಣಾ ರ್ಯಾಲಿಯೊಂದರಲ್ಲಿ, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದ ನಂತರ, "ದೇಶದ್ರೋಹಿಗಳನ್ನು ಗುಂಡು ಹಾರಿಸಿ ಕೊಲ್ಲಿರಿ" ಎಂಬ ಪ್ರಚೋದನಾಕಾರಿ ಘೋಷಣೆಯನ್ನು ಎತ್ತುವಂತೆ ಠಾಕೂರ್ ಜನರಿಗೆ ಕರೆ ನೀಡಿದ್ದರು.
Advertisement