ನಿತಿನ್‍ ಗಡ್ಕರಿ ಅಧ್ಯಕ್ಷತೆಯಲ್ಲಿ ಮೂಲಸೌಕರ್ಯ ಕುರಿತ ತಂಡದ ಸಭೆ: ಕರ್ನಾಟಕದ ಪ್ರತಿನಿಧಿಗಳು ಭಾಗಿ

ಕೇಂದ್ರ ಭೂಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಖಾತೆ ಸಚಿವ ನಿತಿನ್  ಗಡ್ಕರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮೂಲಸೌಕರ್ಯ ಕುರಿತ ತಂಡದ ಸಭೆಯಲ್ಲಿ 187 ಹೆದ್ದಾರಿಗಳ ಯೋಜನೆಗಳಿಗೆ ಬಾಕಿ ಇರುವ ಅರಣ್ಯ ಇಲಾಖೆ ಒಪ್ಪಿಗೆಗಳ ಕುರಿತು ಚರ್ಚಿಸಲಾಯಿತು.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಭೂಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಖಾತೆ ಸಚಿವ ನಿತಿನ್  ಗಡ್ಕರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮೂಲಸೌಕರ್ಯ ಕುರಿತ ತಂಡದ ಸಭೆಯಲ್ಲಿ 187 ಹೆದ್ದಾರಿಗಳ ಯೋಜನೆಗಳಿಗೆ ಬಾಕಿ ಇರುವ ಅರಣ್ಯ ಇಲಾಖೆ ಒಪ್ಪಿಗೆಗಳ ಕುರಿತು ಚರ್ಚಿಸಲಾಯಿತು.

ಅರಣ್ಯ ಇಲಾಖೆ ಒಪ್ಪಿಗೆಯ ಎರಡನೇ ಹಂತಕ್ಕೆ ಅನೇಕ ಯೋಜನೆಗಳಿಗೆ ಇನ್ನೂ ಅರ್ಜಿ ಸಲ್ಲಿಸಿಲ್ಲವಾದ್ದರಿಂದ ಈ ಕುರಿತಂತೆ ಪ್ರಕ್ರಿಯೆಯನ್ನು ತ್ವರಿತ ಆರಂಭಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಯಿತು.

ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ವಾರ್ತಾ ಮತ್ತು ಪ್ರಸಾರ ಹಾಗೂ ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ ಕೆ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.

ಅಲ್ಲದೆ, ಭೂ ಸಾರಿಗೆ ಮತ್ತು ಹೆದ್ದಾರಿ, ರೈಲ್ವೆ, ವಿದ್ಯುತ್, ಪರಿಸರ ಮತ್ತು ಅರಣ್ಯ ಸಚಿವಾಲಯಗಳು, ರೈಲ್ವೆ ಮಂಡಳಿ, ಎನ್ ಎಚ್ ಎಐ ಮತ್ತು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅಪಘಾತಕ್ಕೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಲೆವೆಲ್ ಕ್ರಾಸಿಂಗ್ ಗಳನ್ನು ತೆಗೆದುಹಾಕುವ ಅವಶ್ಯಕತೆಯಿದೆ ಎಂದು ಸಭೆಯಲ್ಲಿ ಪ್ರತಿಪಾದಿಸಲಾಯಿತು. ಇಂತಹ 167 ಸ್ಥಳಗಳನ್ನು ಗುರುತಿಸಲಾಗಿದ್ದು, ಇನ್ನೂ ಕೆಲಸ ಆರಂಭವಾಗಿಲ್ಲ ಎಂದು ಸಭೆಯಲ್ಲಿ ಗಮನ ಸೆಳೆಯಲಾಯಿತು.

ಐದು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಕಾರ್ಯಕ್ಷಮತೆಯನ್ನು ಸುಧಾರಿಸುವುದಕ್ಕೆ ಮತ್ತು ಸೇತು ಭಾರತಂ ಕಾರ್ಯಕ್ರಮದಡಿ ಮಾಸಿಕವಾಗಿ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಒಪ್ಪಲಾಗಿತ್ತು.ರೈಲ್ವೆಯೊಂದಿಗೆ 30 ರಸ್ತೆ ಯೋಜನೆಗಳು ಬಾಕಿ ಉಳಿದಿದ್ದು, ಇವನ್ನು ಎರಡು ದಿನಗಳಲ್ಲಿ ಬಗೆಹರಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com