ಲಖೌನೌ: ಪೊಲೀಸ್ ಎನ್ ಕೌಂಟರ್ ನಲ್ಲಿ ಹತನಾದ ಕುಖ್ಯಾತ ರೌಡಿ ವಿಕಾಸ್ ದುಬೆ ಉತ್ತರ ಪ್ರದೇಶ ರಾಜ್ಯಾದ್ಯಂತ ಭೂ ಕಬಳಿಕೆ ಹಾಗೂ ಸುಲಿಗೆಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾನೆ.
ಭೂ ಕಬಳಿಕೆ ಹಾಗೂ ಬಡ್ಡಿ ಮೇಲೆ ಸಾಲ ನೀಡಿಕೆ ಮತ್ತಿತರ ಅಕ್ರಮ ವ್ಯವಹಾರಗಳಿಂದ ವಿಕಾಸ್ ದುಬೆ ಸಿಂಡಿಕೇಟ್ ವಾರ್ಷಿಕವಾಗಿ 10 ಕೋಟಿ ಆದಾಯ ಗಳಿಸುತಿತ್ತು ಎನ್ನಲಾಗಿದೆ. ಶಿವ್ಲಿ ಡಾನ್ ವೈಭವೋಪೇತವಾಗಿಯೇ ವೆಚ್ಚಗಳು ನಡೆಯುತಿತ್ತು.ಅನೇಕ ಇಲಾಖೆಗಳಲ್ಲಿ ತಮ್ಮವರನ್ನು ಹೊಂದಿದ್ದ ವಿಕಾಸ್ ದುಬೆಗೆ ದೊಡ್ಡ ದೊಡ್ಡ ಕಾಮಗಾರಿಗಳ ಗುತ್ತಿಗೆ ದೊರೆಯಲು ನೆರವು ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
100 ಜನರನ್ನು ಇಟ್ಟುಕೊಂಡು ಭೂ ಕಬಳಿಕೆ ಮಾಡುತ್ತಿದ್ದ ವಿಕಾಸ್ ದುಬೆ, ಕಬಳಿಕೆ ಭೂಮಿಗೆ ದರ ನಿಗದಿ ಮಾಡುತ್ತಿದ್ದ ಅಥವಾ ಮನವಿ ಮೇರೆಗೆ ಅದನ್ನು ಬಿಟ್ಟುಕೊಡುತ್ತಿದ್ದ. ಚೌಬೇಪುರ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕೈಗಾರಿಕೋದ್ಯಮಿಗಳಿಂದ ಸುಲಿಗೆ ಮಾಡುತ್ತಿದ್ದ, ಪ್ರತಿ ತಿಂಗಳು 50 ಲಕ್ಷದವರೆಗೂ ಹಣ ಕೊಡುವಂತೆ ನಿಗದಿಪಡಿಸಿದ್ದ. ಇಲ್ಲಿ ಇಂತಹ ನೂರು ಘಟಕಗಳಿದ್ದು, ಪ್ರತಿ ತಿಂಗಳು ಸುರಕ್ಷತೆಗಾಗಿ ಹಣ ನೀಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಕ್ರೂನಲ್ಲಿ ಫಾರಂ ಹೊಂದಿದ್ದ ವಿಕಾಸ್ ದುಬೆ ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾನೆ. ಲಖೌನೌದಲ್ಲಿ ಎರಡು ಫ್ಲಾಟ್ ಗಳಿದ್ದು, ಒಂದರಲ್ಲಿ ಆತನ ಹೆಂಡತಿ ಮತ್ತು ಮಗ ವಾಸಿಸುತ್ತಿದ್ದಾರೆ. ಮತ್ತೊಂದನ್ನು ಬಾಡಿಗೆಗೆ ನೀಡಿದ್ದಾನೆ. ಆತನ ಹಿರಿಯ ಮಗ ಇಂಗ್ಲೆಂಡ್ ನಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಕಿರಿಯ ಮಗ ಲಖೌನೌದಲ್ಲಿನ ಮಿಲ್ಲೇನಿಯಂ
ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವಿಕಾಸ್ ದುಬೆ ವಿರುದ್ಧ ಹತ್ಯೆ, ದರೋಡೆ, ಲೂಟಿ, ಭೂ ಕಬಳಿಕೆ ಮತ್ತು ಸುಲಿಗೆ ಸೇರಿದಂತೆ 60 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
Advertisement