ನವದೆಹಲಿ: ಬೈಕ್ ನಲ್ಲಿ ಸ್ಟಂಟ್ ಮಾಡಬೇಡಿ ಎಂದು ಬುದ್ದಿಮಾತು ಹೇಳಿದ 25 ವರ್ಷದ ಯುವಕನ ಮೇಲೆ ಮೂವರು ಹುಡುಗರು ಹಲ್ಲೆ ಮಾಡಿ ಸಾಯಿಸಿರುವ ಘಟನೆ ಪಶ್ಚಿಮ ದೆಹಲಿಯ ರಘುಬಿರ್ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಮನೀಶ್ ಎಂದು ಗುರುತಿಸಲಾಗಿದ್ದು ಈತ ಖಾಸಗಿ ಕಾರು ಚಾಲಕನಾಗಿದ್ದ. ಈತನನ್ನು ಕೊಂದ ಮೂವರು ಹುಡುಗರು 16-17 ವರ್ಷದವರಾಗಿದ್ದು ಅವರನ್ನು ಬಂಧಿಸಲಾಗಿದೆ.
ಮೊನ್ನೆ ಜುಲೈ 8ರಂದು ಈ ಘಟನೆ ನಡೆದಿದ್ದು, ಮೂವರೂ ಮನೀಶ್ ನನ್ನು ಮನಸೋ ಇಚ್ಛೆ ರಘುವಿರ್ ನಗರದ ರಸ್ತೆಯಲ್ಲಿ ಥಳಿಸುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.ಬಾಲಾಪರಾಧಿಗಳ ವಿರುದ್ಧ ಕೊಲೆ ಕೇಸು ದಾಖಲಿಸಲಾಗಿದೆ ಎಂದು ಕ್ಯಾಲ ಪೊಲೀಸ್ ಠಾಣೆಯ ಉಪ ಆಯುಕ್ತ ದೀಪಕ್ ಪುರೋಹಿತ್ ತಿಳಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿ ಮೇರೆಗೆ ಮೂವರು ಬಾಲಾಪರಾಧಿಗಳನ್ನು ಅವರು ತಪ್ಪಿಸಿಕೊಂಡು ಮರೆಯಾಗಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದ್ದು ಮನೀಶ್ ನನ್ನು ಕೊಲ್ಲಲು ಬಳಸಿದ್ದ ಸಾಧನಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement