ಬೆಂಗಳೂರು: ಉತ್ತರಾಖಂಡ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರವಿ ವಿಜಯ್ಕುಮಾರ್ ಮಳಿಮಠ್ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಸಂಬಂಧ ಪ್ರಕಟಣೆ ಹೊರಡಿಸಿದೆ. ಉತ್ತರಾಖಂಡ ಹೈಕೋರ್ಟ್ ಸಿಜೆ ರಮೇಶ್ ರಂಗನಾಥ್ ಅವರು ಜುಲೈ 28ರಂದು ನಿವೃತ್ತಿ ಹೊಂದಲಿದ್ದು, ತೆರವಾಗುವ ಹುದ್ದೆಗೆ ಸಂವಿಧಾನದ 223ನೇ ಪರಿಚ್ಛೇದದ ಅನುಸಾರ ನ್ಯಾ.ರವಿ ಮಳಿಮಠ್ ಅವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದೆ.
ರವಿಮಳಿಮಠ್ ಅವರನ್ನು ಸಿಜೆಯಾಗಿ ನೇಮಿಸುವ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನೊಳಗೊಂಡ ಕೊಲಿಜಿಯಂ ಫೆ. 12ರಂದು ಶಿಫಾರಸು ಮಾಡಿತ್ತು. ಮಳಿಮಠ್ ಅವರು ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳಿಮಠ್ ಅವರ ಪುತ್ರರಾಗಿದ್ದು, 1987ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು.
2008ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ನಂತರ, 2010ರ ಫೆಬ್ರವರಿಯಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ್ದರು.
Advertisement