ಮಥುರಾ: 35 ವರ್ಷಗಳ ಹಿಂದಿನ ರಾಜಸ್ಥಾನದ ಭರತ್ಪುರ ಎಸ್ಟೇಟ್ನ ರಾಜಾ ಮನ್ ಸಿಂಗ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಆರೋಪಿಗಳ ಪೈಕಿ ತಪ್ಪಿತಸ್ಥ 11 ಪೊಲೀಸರಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಾಧನಾ ರಾಣಿ ಠಾಕೂರ್ ಅವರು ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸಿದರು.
ಮಂಗಳವಾರ ನ್ಯಾಯಾಧೀಶರು ಪ್ರಕರಣದಲ್ಲಿ ನಾಲ್ವರು ಖುಲಾಸೆಗೊಳಿಸಿ, 11 ಪೊಲೀಸರು ತಪ್ಪಿತಸ್ಥರೆಂದು ತೀರ್ಪು ನೀಡಿದ್ದರು. ಆದರೆ ಶಿಕ್ಷಣಯ ಪ್ರಮಾಣ ಇಂದಿಗೆ ಕಾಯ್ದಿರಿಸಿದ್ದರು.
1985ರ ಫೆಬ್ರವರಿ 21 ರಂದು ರಾಜಾ ಮನ್ ಸಿಂಗ್ ಮತ್ತು ಇತರ ಇಬ್ಬರು ಪೊಲೀಸರು ಎನ್ಕೌಂಟರ್ ನಲ್ಲಿ ಹತ್ಯೆಯಾಗಿದ್ದರು.
ರಾಜಾ ಮನ್ ಸಿಂಗ್ ಅವರ ಪುತ್ರಿ ದೀಪಾ ಸಿಂಗ್ ಮತ್ತು ಅವರ ಪತಿ ವಿಜಯ್ ಸಿಂಗ್ ಅವರು ಪೊಲೀಸರ ವಿರುದ್ಧ ಹತ್ಯೆ ಆರೋಪ ಮಾಡಿ, ರಾಜಸ್ಥಾನದ ಡೀಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಸಿಬಿಐ ಈ ಕುರಿತು ತನಿಖೆ ನಡೆಸಿ ರಾಜಸ್ಥಾನ ಹೈಕೋರ್ಟ್ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ನಂತರ, ಸುಪ್ರೀಂ ಕೋರ್ಟ್ 1990 ರಲ್ಲಿ ಈ ಪ್ರಕರಣವನ್ನು ಮಥುರಾಕ್ಕೆ ವರ್ಗಾಯಿಸಿತ್ತು. ಮೂಲಗಳಂತೆ, ರಾಜಾ ಮನ್ ಸಿಂಗ್ ಅವರು 1985ರಲ್ಲಿ ಡೀಗ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅದೇ ವರ್ಷ ಫೆಬ್ರವರಿ 20 ರಂದು ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಬ್ರಜೇಂದ್ರ ಸಿಂಗ್ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಬಂದಿದ್ದ ಅಂದಿನ ಮುಖ್ಯಮಂತ್ರಿ ಶಿವಚರಣ್ ಮಾಥುರ್ ಅವರ ಹೆಲಿಕಾಪ್ಟರ್ ಅನ್ನು ರಾಜಾ ಮನ್ಸಿಂಗ್ ಹಾನಿಗೊಳಿಸಿದ್ದರು ಎನ್ನಲಾಗಿತ್ತು.
ತಮ್ಮ ಕೋಟೆಯ ಮೇಲಿಂದ ತಮ್ಮದೇ ಧ್ವಜವನ್ನು ತೆಗೆದುಹಾಕಿ ಅಲ್ಲಿ ಕಾಂಗ್ರೆಸ್ ಧ್ವಜ ಹಾಕಿದ್ದಕ್ಕಾಗಿ ಬ್ರಜೇಂದ್ರ ಸಿಂಗ್ ಮೇಲೆ ರಾಜಾ ಮಾನ್ಸಿಂಗ್ ಸಿಟ್ಟಾಗಿದ್ದರು ಎನ್ನಲಾಗಿದೆ.
ಮರುದಿನವೇ ಪೊಲೀಸರು ರಾಜಾ ಮನ್ ಸಿಂಗ್ ಮತ್ತು ಅವರ ಇಬ್ಬರು ಬೆಂಬಲಿಗರಾದ ಸುಮೇರ್ ಸಿಂಗ್ ಮತ್ತು ಹರಿ ಸಿಂಗ್ ಅವರನ್ನು ಮಂಡಿ ಬಳಿ ಉಪ ಪೊಲೀಸ್ ವರಿಷ್ಠಾಧಿಕಾರಿ ಕಾನ್ ಸಿಂಗ್ ಭತಿ ಮತ್ತು ಅವರ ತಂಡ ಎನ್ಕೌಂಟರ್ ಮಾಡಿ ಸಾಯಿಸಿತ್ತು.
Advertisement