ನವದೆಹಲಿ: ನೋವಾಲ್ ಕೊರೋನಾವೈರಸ್ ಕಾರಣದಿಂದಾಗಿ ರಾಷ್ಟ್ರ ರಾಜಧಾನಿ ಕೆಂಪು ಕೋಟೆಯಲ್ಲಿ ನಡೆಯಲಿರುವ ಈ ಬಾರಿಯ ಸ್ವಾತಂತ್ರ್ಯೋತ್ಸವ ಕಳೆಗುಂದಲಿದೆ. ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೆಲವೇ ಮಂದಿ ಗಣ್ಯರಷ್ಟೇ ಭಾಗವಹಿಸುವ ಸಾಧ್ಯತೆ ಇದೆ.
ಡಾಕ್ಟರ್, ಆರೋಗ್ಯ ಕಾರ್ಯಕರ್ತೆಯರು, ಪೌರ ಕಾರ್ಮಿಕರಂತಹ ಕೋವಿಡ್-19 ವಾರಿಯರ್ಸ್ ಗಳನ್ನು ಗಣ್ಯರಾಗಿ ಆಹ್ವಾನಿಸುವಂತೆ
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊರೋನಾವೈರಸ್ ಕಾಱಣ ಕೆಂಪು ಕೋಟೆಯಲ್ಲಿ
ನಡೆಯಲಿರುವ ಸಮಾರಂಭಕ್ಕೆ ಕಡಿಮೆ ಸಂಖ್ಯೆಯ ಗಣ್ಯರನ್ನು ಆಹ್ವಾನಿಸಲಾಗುವುದು, ಅವರಿಗೆ ಆರು ಅಡಿಗಳ ಅಂತರದಂತೆ
ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಹಾಗೂ ಸ್ಯಾನಿಟೈಸ್ ಕಾರ್ಯಕ್ಕಾಗಿ ಆಗಸ್ಟ್ 1 ರಿಂದ ಕೆಂಪು ಕೋಟೆಯನ್ನು ಸಾರ್ವಜನಿಕ ವೀಕ್ಷಣೆಗೆ ಬಂದ್ ಮಾಡಲಾಗಿದ್ದು, ಶಾಲಾ ಮಕ್ಕಳಿಂದ ಪ್ರದರ್ಶನ ಇರುವುದಿಲ್ಲ, ಇದರ ಬದಲಿಗೆ ಕೆಲ ಎನ್ ಸಿಸಿ ಕೆಡಿಟ್ ಗಳನ್ನು ಆಹ್ವಾನಿಸಲಾಗುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು, ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಸ್ಚ್ 15 ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆಂಪು ಕೋಟೆಯಲ್ಲಿ
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ.
Advertisement