ಇಂದೋರ್: ಇಂದೋರ್ ನಲ್ಲಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಹಣ್ಣು ಮಾರುವ ಮಹಿಳೆ ಓರ್ವ ಪಿಹೆಚ್ ಡಿ ಪದವೀಧರೆ, ಆಕೆಗೆ ಎಲ್ಲೂ ಕೆಲಸ ಸಿಗದ ಕಾರಣ ಹಣ್ಣುಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರೆಂಬ ಅಂಶ ಬಹಿರಂಗವಾಗಿದೆ.
ಪರ್ದೇಶಿಪುರದ ಬೇಕರಿ ಸ್ಟ್ರೀಟ್ ನ ನಿವಾಸಿಯಾಗಿರುವ ರಯೀಸಾ ಅನ್ಸಾರಿ ಮೆಟೀರಿಯಲ್ ಸೈನ್ಸ್ ವಿಷಯದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದು, ಎಲ್ಲೂ ಕೆಲಸ ಸಿಗದ ಕಾರಣ ಹಣ್ಣು ಮಾರುವ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ.
ರಯೀಸಾ ಅವರ ಸಹೋದರ/ ಸಹೋದರಿಯರೂ ಸಹ ಉತ್ತಮ ವಿದ್ಯಾವಂತರಾಗಿದ್ದಾರೆ. ದುರದೃಷ್ಟವಶಾತ್ ಅವರಿಗೂ ಸಹ ಎಲ್ಲೂ ನೌಕರಿ ದೊರೆತಿಲ್ಲ.
"ನಾನು ಮೆಟೀರಿಯಲ್ಸ್ ಸೈನ್ಸ್ ವಿಭಾಗದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದೇನೆ, ವಿಜ್ಞಾನಿಯಾಗಬೇಕೆಂಬ ಆಸೆ ಹೊಂದಿದ್ದೆ. ಆದರೆ ಎಲ್ಲೂ ಕೆಲಸ ಸಿಗದೇ ಇಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದೇನೆ ಆದರೆ ಪುರಸಭೆ ಅಧಿಕಾರಿಗಳು ನಮಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮನ್ನು ಪಶುಗಳಂತೆ ಒಂದೆಡೆಯಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಿಸುತ್ತಿದ್ದಾರೆ. ನಮಗೆ ಕೆಲಸ ಸಿಗದೇ ಇರಲು ನಮ್ಮ ಧರ್ಮವೂ ಕಾರಣವಾಗಿರಬಹುದು, ನಾವು ಭಾರತೀಯರೆಂಬುದಕ್ಕೆ ಹೆಮ್ಮೆ ಇದೆ, ಈಗಲೂ ಕೆಲಸ ಹುಡುಕುತ್ತಿದ್ದೇನೆ ಎಂದು ರಯೀಸಾ ಅನ್ಸಾರಿ ಹೇಳಿದ್ದಾರೆ.
ರಯೀಸಾ ಅವರ ತಾಯಿ ಆಯೇಷಾ ಮಾತನಾಡಿದ್ದು, ನಾನು ವಿದ್ಯಾವಂತೆ ಅಲ್ಲ, ಆದರೆ ಮೂವರು ಹೆಣ್ಣುಮಕ್ಕಳು ಓರ್ವ ಗಂಡು ಮಗ ಎಲ್ಲರೂ ವಿದ್ಯಾವಂತರೇ ಆದರೆ ಒಬ್ಬರಿಗೂ ನೌಕರಿ ದೊರೆತಿಲ್ಲ.
ಓರ್ವ ಮಗಳಿಗೆ ವಿವಾಹವಾಗಿದೆ. ರಯೀಸಾ ಹಾಗೂ ಶಾಜಹಾನ್ ಬಿ ವಿದ್ಯಾವಂತ ಯುವಕರನ್ನೇ ವಿವಾಹವಾಗಲು ಬಯಸಿದ್ದರು. ಆದರೆ ಸೂಕ್ತ ವರ ಸಿಗಲಿಲ್ಲ. ಕೆಲವೊಮ್ಮೆ ಅವರ ಮೈಬಣ್ಣದ ಕಾರಣದಿಂದಾಗಿ ಸೂಕ್ತ ಆಯ್ಕೆ ಸಿಗದೇ ಹೋದರೆ ಮತ್ತೆ ಕೆಲವೊಮ್ಮೆ ವರದಕ್ಷಿಣೆಯ ಕಾರಣದಿಂದಾಗಿ ತಿರಸ್ಕರಿಸಲಾಗಿತ್ತು. ಆದ್ದರಿಂದ ಇಬ್ಬರಿಗೂ ವಿವಾಹವಾಗಿಲ್ಲ. ಇನ್ನು ವಿವಾಹವಾದ ಮಗಳ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದು ವೈದ್ಯರಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ರಯೀಸಾ ಅವರ ನೆರೆಯ ಮನೆಗಳಲ್ಲೂ ಈ ಕುಟುಂಬದವರ ವಿದ್ಯಾರ್ಹತೆಗಳನ್ನು ಮೆಚ್ಚಿ, ಶ್ಲಾಘಿಸುತ್ತಾರೆ. ನೌಕರಿ ದೊರೆಯದೇ ಇರುವ ಕಾರಣದಿಂದಾಗಿ ಹಣ್ಣು ಮಾರುತ್ತಿದ್ದಾರೆಂದು ಹೇಳುತ್ತಾರೆ.
Advertisement