ಭೋಪಾಲ್: ಭಾರತಕ್ಕೆ ಕಂಗ್ಗಂಟಾಗಿರುವ ಪರಿಣಮಿಸಿರುವ ಕೊರೋನಾ ವೈರಸನ್ನು ನಿಗ್ರಹಿಸಲು ಆಗಸ್ಟ್ 5ರವರೆಗೂ ದಿನಕ್ಕೆ 5 ಬಾರಿ ಹನುಮಾನ ಚಾಲಿಸಾ ಪಠಿಸಬೇಕೆಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮನವಿ ಮಾಡಿಕೊಂಡಿದ್ದಾರೆ.
ರಾಮ ಮಂದಿರ ದೇಗುಲ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ಭೂಮಿ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಜ್ಞಾ ಠಾಕೂರ್ ಅವರು, ನಾವೆಲ್ಲರೂ ಒಗ್ಗಟ್ಟಾಗಿ ಆಧ್ಯಾತ್ಮಿಕದ ಮೂಲಕ ಮಾರಣಾಂತಿಕ ಕೊರೋನಾ ವೈರಸ್ ನ್ನು ಜಗತ್ತಿನಿಂದ ತೊಡೆದು ಹಾಕಲು ಪ್ರಯತ್ನಿಸೋಣ. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸೋಣ. ಹೀಗಾಗಿ ಜು.25ರಿಂದ ಆಗಸ್ಟ್ 5ರವರೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾ ಪಠಿಸಿ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲಾ ಹಿಂದೂಗಳು ಒಂದೇ ಧ್ವನಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದರೆ, ಆ ಶಕ್ತಿ ಖಂಡಿತವಾಗಿಯೂ ಕೆಲಸ ಮಾಡುತ್ತದೆ ಮತ್ತು ನಾವು ಕೊರೋನಾ ವೈರಸ್ ನಿಂದ ಮುಕ್ತರಾಗುತ್ತೇವೆ. ಇದು ಭಗವಾನ್ ರಾಮನಿಗಾಗಿ ನಿಮ್ಮ ಪ್ರಾರ್ಥನೆಯಾಗಲಿದೆ. ಆಗಸ್ಟ್ 5ರಂದು ಮನೆಯಲ್ಲೇ ದೀಪಗಳನ್ನು ಬೆಳಗಿಸಿ ರಾಮನಿಗೆ ಆರತಿ ಅರ್ಪಿಸುವ ಮೂಲಕ ನಿಮ್ಮ ಆಚರಣೆಯನ್ನು ಮುಕ್ತಾಯಗೊಳಿಸಿ ಎಂದು ಕೇಳಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕನ್ನು ತಡೆಯುವ ಸಲುವಾಗಿ ಇಲ್ಲಿನ ಬಿಜೆಪಿ ಸರ್ಕಾರ ಆಗಸ್ಟ್4ರವರೆಗೆ ಲಾಕ್ಡೌನ್ ಘೋಷಣೆ ಮಾಡಿದೆ. ಲಾಕ್ಡೌನ್ 4ಕ್ಕೆ ಮುಗಿದರೂ ಹನುಮಾನ್ ಚಾಲಿಸಾ ಪಠಣ ಆಗಸ್ಟ್ 5ರಂದು ಕೊನೆಗೊಳ್ಳಲಿದೆ. ಈ ದಿನ ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ ನಡೆಯಲಿದ್ದು, ಆ ದಿನವನ್ನು ನಾವು ದೀಪಾವಳಿಯಂತೆ ಆಚರಿಸಲಿದ್ದೇವೆಂದು ತಿಳಿಸಿದ್ದಾರೆ.
Advertisement