ಜೈಪುರ: ರಾಜಸ್ತಾನ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿ ನೋಡಿದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸೋಲು ಎದುರಾಗುತ್ತಿರುವಂತೆ ಕಾಣುತ್ತಿದೆ.
ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಬಂಡಾಯ ಶಾಸಕರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅನರ್ಹತೆ ಪ್ರಶ್ನಿಸಿ ಅರ್ಜಿಯನ್ನು ಅನರ್ಹಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಿಧಾನಸಭೆ ಸ್ಪೀಕರ್ ಸಿ ಪಿ ಜೋಶಿ ಇಂದು ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.
ಸ್ಪೀಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಆರಂಭಿಸಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಸ್ಪೀಕರ್ ಅರ್ಜಿಯನ್ನು ಹಿಂಪಡೆದಿದ್ದಾರೆ. ಕಳೆದ ವಾರ ಆದೇಶ ನೀಡಿದ್ದ ರಾಜಸ್ತಾನ ಹೈಕೋರ್ಟ್, ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಶಾಸಕರ ಅನರ್ಹತೆ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿತ್ತು.
ಇನ್ನೊಂದೆಡೆ ಜುಲೈ 31ಕ್ಕೆ ಅಧಿವೇಶನ ಆರಂಭಿಸಲು ಅವಕಾಶ ನೀಡುವಂತೆ ಕೋರಿ ಮೊನ್ನೆ ಅಶೋಕ್ ಗೆಹ್ಲೋಟ್ ಸರ್ಕಾರ ಕಳುಹಿಸಿದ್ದ ಹೊಸ ಪ್ರಸ್ತಾವನೆಯನ್ನು ಮತ್ತೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ವಾಪಸ್ ಕಳುಹಿಸಿದ್ದಾರೆ. ಅಧಿವೇಶನ ಏಕೆ ನಡೆಸಬೇಕೆಂದು ಇನ್ನಷ್ಟು ವಿವರಣೆ ನೀಡುವಂತೆ ರಾಜ್ಯಪಾಲರು ಕೇಳಿದ್ದಾರೆ.
Advertisement