ಲಕ್ನೋ: ಅಯೋಧ್ಯೆಯಲ್ಲಿ ಮಸೀದಿ ಹಾಗೂ ಇನ್ನಿತರ ಸೌಕರ್ಯಗಳ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ, ಟ್ರಸ್ಟ್ ವೊಂದನ್ನು ರಚಿಸಿದೆ.
15 ಮಂದಿ ಸದಸ್ಯರನ್ನು ಒಳಗೊಂಡಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಎಂಬ ಹೆಸರಿನಲ್ಲಿ ಈ ಟ್ರಸ್ಟ್ ರಚಿಸಲಾಗಿದೆ ಎಂದು ಬುಧವಾರ ಪ್ರಕಟಿಸಿದೆ.
ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸಂಸ್ಥಾಪಕ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದು. ಸುನ್ನಿ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಟ್ರಸ್ಟ್ ಅಧ್ಯಕ್ಷರಾಗಿ, ಅಥರ್ ಹುಸೇನ್ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ನಂತೆ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಮಂಜೂರು ಮಾಡಿರುವ 5 ಎಕರೆ ಭೂಮಿಯಲ್ಲಿ ಮಸೀದಿ ಮತ್ತು ಇತರ ನಿರ್ಮಾಣವನ್ನು ಈ ಟ್ರಸ್ಟ್ ನೇತೃತ್ವದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ತಕ್ಷಣವೇ ಮಸೀದಿ ನಿರ್ಮಾಣ ಕಾಮಗಾರಿ ಇಲ್ಲ
5 ಎಕರೆಯನ್ನು ಪಡೆಯಲಿರುವ ಮಸೀದಿಯ ಟ್ರಸ್ಟ್ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿದ್ದ ಕಟ್ಟಡದಷ್ಟೇ ದೊಡ್ಡದಾದ ಮಸೀದಿಯನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು ಸ್ಥಳೀಯ ಜನತೆಗೆ ಆರೋಗ್ಯ ಸೇವೆ, ಹಾಗೂ ಸಮುದಾಯ ಸೇವೆ ನೀಡಲು ಮುಂದಾಗಿದೆ. ಜೊತೆಗೆ ಇಂಡೋ ಇಸ್ಲಾಮಿಕ್ ಸಂಸ್ಕೃತಿಯನ್ನು ಉತ್ತೇಜಿಸುವ ಯೋಜನೆ ಹೊಂದಿದೆ.
ಟ್ರಸ್ಟ್ ರಚನೆಯಾಗಿದೆಯಾದರೂ ತಕ್ಷಣವೇ ಮಸೀದಿ ನಿರ್ಮಾಣ ಮಾಡುವುದಿಲ್ಲ. ದೇಶದಲ್ಲಿ ಕೋವಿಡ್-19 ವಿರುದ್ಧ ಹೋರಾಡುವುದು ಆದ್ಯತೆಯ ವಿಷಯವಾಗಿದೆ ಆದ ಕಾರಣ ಕೋವಿಡ್-19 ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಈ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಚುರುಕುಪಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.
Advertisement