ಪ್ರಕಾಶಂ: ಸ್ಯಾನಿಟೈಸರ್ ಸೇವಿಸಿ ಮೂವರು ಭಿಕ್ಷುಕರು ಸೇರಿ ಒಟ್ಟು 10 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುರಿಚೇಡು ಮಂಡಲ ಹೆಡ್ ಕ್ವಾರ್ಟರ್ ಟೌನ್ ನಲ್ಲಿ ಕಳೆದ ಮೂರು ದಿನಗಳಿಂದ ಅಸಹಜ, ಅನುಮಾನಾಸ್ಪದ ಸಾವುಗಳು ಸಂಭವಿಸುತ್ತಿದ್ದವು. ಕಳೆದ ಮೂರು ದಿನಗಳಿಂದ 3 ಸಾವು ಸಂಭವಿಸುತ್ತಿದ್ದರೆ ಜು.31 ರಂದು (ಶುಕ್ರವಾರ) ಬೆಳಿಗ್ಗೆ 7 ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಇದಕ್ಕೂ ಮುನ್ನ ಗುರುವಾರ ರಾತ್ರಿ ಕುರಿಚೇಡು ಪೊಲೇರಮ್ಮ ದೇವಾಲಯದ ಬಳಿ ಇದ್ದ ಭಿಕ್ಷುಕ ಏಕಾ ಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದ ಈ ಬೆನ್ನಲ್ಲೇ ಮತ್ತೋರ್ವ ಭಿಕ್ಷುಕ ಸಹ ಇದೇ ಮಾದರಿಯಲ್ಲಿ ಕುಸಿದುಬಿದ್ದಿದ್ದ ತಕ್ಷಣವೇ ಎಚ್ಚೆತ್ತ ಸ್ಥಳೀಯರು ಆತನನ್ನು 108 ರಲ್ಲಿ ದಾರ್ಸಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಮಾರ್ಗ ಮಧ್ಯದಲ್ಲೆ ಮೃತಪಟ್ಟಿದ್ದ.
ಗುರುವಾರ ಮಧ್ಯರಾತ್ರಿ ದೇವಾಲಯದ ಸುತ್ತಮುತ್ತಲಿರುವ ಪ್ರದೇಶಗಳ 7 ಜನರು ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಿಗ್ಗೆ 6 ಮಂದಿ ಮೃತಪಟ್ಟರೆ, ಓರ್ವ ಚಿಕಿತ್ಸೆ ಪಡೆಯುತ್ತಿದ್ದ ಹಂತದಲ್ಲಿ ಮೃತಪಟ್ಟಿದ್ದಾನೆ.
ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುರ್ಚೇಡು, ದಾರ್ಸಿಗಳನ್ನು ಕಂಟೈನ್ಮೆಂಟ್ ಜೋನ್ ಗಳನ್ನಾಗಿ ಘೋಷಿಸಲಾಗಿದ್ದು, ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ನ್ನು ನೀರು ಹಾಗೂ ತಂಪು ಪಾನಿಯಕ್ಕೆ ಮಿಶ್ರಣ ಮಾಡಿಕೊಂಡು ಕುಡಿದ್ದರ ಪರಿಣಾಮ 10 ಜನರು ಮೃತಪಟ್ಟಿದ್ದಾರೆ ಎಂದು ದಾರ್ಸಿ ಡಿಎಸ್ ಪಿ ಪ್ರಕಾಶ್ ರಾವ್ ತಿಳಿಸಿದ್ದಾರೆ. ಮೃತರ ಮನೆಗಳಿಗೆ ತೆರಳಿ ಸ್ಯಾನಿಟೈಸರ್ ಬಾಟಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement