ಭೋಪಾಲ: ಚಲಿಸುತ್ತಿದ್ದ ರೈಲಿನೊಂದಿಗೆ ಮಿಂಚಿನಂತೆ ಓಡಿ ಹಸಿದ ಮಗುವಿಗೆ ಅಗತ್ಯವಿದ್ದ ಹಾಲು ತಲುಪಿಸಿದ ಆರ್ ಪಿಎಫ್ ಸಿಬ್ಬಂದಿ ಸಾಹಕ್ಕೆ ರೈಲ್ವೇ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿದ್ದು, ಆರ್ ಪಿಎಫ್ ಸಿಬ್ಬಂದಿ ಇಂದ್ರ ಸಿಂಗ್ ಯಾದವ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. 4 ವರ್ಷದ ಮಗುವಿಗೆ ಹಾಲಿನ ಬಾಟಲಿ ನೀಡಲು ರೈಲಿಗಿಂತ ವೇಗವಾಗಿ ಓಡಿ ತಾಯಿಗೆ ಬಾಟಲಿ ತಲುಪಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ಅವರ ಸೇವೆ ಗುರುತಿಸಿ ಅವರಿಗೆ ಇಲಾಖೆ ವತಿಯಿಂದ ನಗದು ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಇಂದರ್ ಸಿಂಗ್ ಯಾದವ್ರ ಸಾಹಸವನ್ನು ಕೊಂಡಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕಾನ್ಸ್ಟೆಬಲ್ಗೆ ನಗದು ಬಹುಮಾನ ಘೋಷಿಸಿರುವುದಾಗಿ ತಿಳಿಸಿದ್ದಾರೆ. ಜತೆಗೆ ಮಗುವಿನ ತಾಯಿಯು ಇಂದರ್ ಅವರಿಗೆ ಧನ್ಯವಾದ ತಿಳಿಸಿರುವ ವಿಡಿಯೋವನ್ನು ಸಚಿವರು ಟ್ವೀಟ್ ಮಾಡಿದ್ದಾರೆ.
ಏನಿದು ಘಟನೆ
ಶ್ರಮಿಕ್ ಎಕ್ಸ್ಪ್ರೆಸ್ನಲ್ಲಿ ಗೋರಖ್ಪುರಕ್ಕೆ ಹೊರಟಿದ್ದ ಶಫಿಯಾ ಹಶೀಮ್, ತಮ್ಮ 4 ತಿಂಗಳ ಮಗುವಿಗಾಗಿ ಹಾಲು ತೆಗೆದುಕೊಳ್ಳುವುದನ್ನು ಮರೆತಿದ್ದರು. ರೈಲಿನಲ್ಲಿ ಪ್ರಯಾಣಿಸುವಾಗ ಹಸಿವಿನಿಂದ ಮಗು ಅಳಲು ಆರಂಭಿಸಿದ ಕಾರಣ ಬಿಸ್ಕೆಟ್ಗಳನ್ನು ನೀರಿನಲ್ಲಿ ಅದ್ದಿ ತಿನ್ನಿಸಿದ್ದರು. ಅಷ್ಟರಲ್ಲೇ ರೈಲು ಭೋಪಾಲ ನಿಲ್ದಾಣ ತಲುಪಿದ್ದು, ಅಲ್ಲೇ ನಿಂತಿದ್ದ ಆರ್ಪಿಎಫ್ ಸಿಬ್ಬಂದಿ ಇಂದರ್ ಸಿಂಗ್ ಯಾದವ್ ಅವರನ್ನು ಕರೆದ ಶಫಿಯಾ, ಮಗುವಿಗೆ ಹಾಲು ತಂದು ಕೊಡುವಂತೆ ಕೋರಿದ್ದಾರೆ.
ತಕ್ಷಣ ಅಂಗಡಿಯತ್ತ ಹೋದ ಇಂದರ್ ಸಿಂಗ್ ಯಾದವ್, ಹಾಲು ಕೊಳ್ಳುವಷ್ಟರಲ್ಲಿ ರೈಲು ಮುಂದೆ ಸಾಗಿದೆ. ರೈಲು ಹೋಗುವುದನ್ನು ಗಮನಿಸಿದ ಇಂದರ್, ಒಂದು ಕೈನಲ್ಲಿ ಹಾಲಿನ ಪ್ಯಾಕೆಟ್ ಹಿಡಿದುಕೊಂಡು ಮಹಿಳೆ ಇದ್ದ ಕೋಚ್ನತ್ತ ವೇಗವಾಗಿ ಓಡಿ ಹೋಗಿ ಹಾಲು ತಲುಪಿಸಿದ್ದಾರೆ. ಇಂದರ್ರ ಸಾಹಸ ಕಂಡು ರೈಲು ನಿಲ್ದಾಣದಲ್ಲಿದ್ದವರೆಲ್ಲಾ ಚಪ್ಪಾಳೆ ಮೂಲಕ ಪ್ರಶಂಸಿಸಿದ್ದಾರೆ. ಊರು ತಲುಪಿದ ಶಫಿಯಾ ಇಂದರ್ ಅವರಿಗೆ ಧನ್ಯವಾದ ಹೇಳಿದ್ದಲ್ಲದೆ, ಅವರು ನಮ್ಮ ಪಾಲಿನ ‘ರಿಯಲ್ ಹೀರೊ’ ಎಂದು ಬಣ್ಣಿಸಿದ್ದಾರೆ. ಕಾನ್ ಸ್ಟೇಬಲ್ ಇಂದ್ರ ಸಿಂಗ್ ಯಾದವ್ ಅವರು ರೈಲಿನೊಂದಿಗೆ ಓಡುವ ದೃಶ್ಯ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement