ಕೇರಳ ಆನೆ ಸಾವು ದುರಂತ: 3 ಶಂಕಿತರ ಬಂಧನ, ಮರಣೋತ್ತರ ವರದಿ ಬಹಿರಂಗ!

ಕೇರಳದ ಗರ್ಭಿಣಿ ಆನೆ ಸಾವು ದುರಂತಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ.
ಕಾಡಾನೆ
ಕಾಡಾನೆ

ಕೊಚ್ಚಿನ್: ಕೇರಳದ ಗರ್ಭಿಣಿ ಆನೆ ಸಾವು ದುರಂತಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಗರ್ಭಿಣಿ ಆನೆ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿದೆ. ಶೀಘ್ರದಲ್ಲೇ ಮೂಕ ಪ್ರಾಣಿಯ ಸಾವಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. 

ಆನೆ ಸಾವಿನಲ್ಲೂ ದ್ವೇಷ ರಾಜಕಾರಣಕ್ಕೆ, ಸಿಎಂ ಬೇಸರ
ಇದೇ ವೇಳೆ ಗರ್ಭಿಣಿ ಆನೆಯ ಸಾವು ನಮಗೂ ನೋವು ತಂದಿದೆ. ಅನೇಕರು ಈ ಸಂಬಂಧ ನಮ್ಮ ಪರಿಗಣನೆಗೆ ತರುವ ಕೆಲಸ ಮಾಡಿದ್ದೀರಿ. ಈ ವಿಚಾರವನ್ನ ದ್ವೇಷ ರಾಜಕಾರಣಕ್ಕೆ ಬಳಸಿರುವುದ ನೋವಾಗಿದೆ. ನಾವು ಅನ್ಯಾಯವನ್ನ ಎಂದು ಸಹಿಸುವುದಿಲ್ಲ. ಆದರೆ ಈ ವಿಚಾರದಲ್ಲಿ ಸತ್ಯ ಬಿಟ್ಟು ಏನೆಲ್ಲಾ ಹಬ್ಬಿಸಿದ್ದರು ಎಂದು ಸಿಎಂ ವಿಜಯನ್ ಬೇಸರ ವ್ಯಕ್ತಪಡಿಸಿದ್ದಾರೆ. 

ಮರಣೋತ್ತರ ವರದಿ ಬಹಿರಂಗ!
ಇನ್ನು ಗುರುವಾರ ಆನೆಯ ಮೃತ ದೇಹವನ್ನು ವಶಪಡಿಸಿಕೊಂಡ ಮನ್ನಾರ್ ಕಾಡ್ ವಿಭಾಗೀಯ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ನಡಸಿದರು. ಇದೀಗ ಈ ಮರಣೋತ್ತರ ವರದಿ ಬಂದಿದ್ದು, ವರದಿಯಲ್ಲಿ ಗರ್ಭಿಣಿ ಆನೆ ಶ್ವಾಸಕೋಶದ ಆಘಾತದಿಂದಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಅಂತೆಯೇ ಪೈನಾಪಲ್ ಬಾಂಬ್ ಆನೆಯ ಬಾಯಿಯಲ್ಲಿ ಸ್ಫೋಟಗೊಂಡಿದ್ದರಿಂದ ಆನೆಗೆ ಕುಡಿಯಲು ತಿನ್ನಲು ಆಗುತ್ತಿರಲಿಲ್ಲ. ಸಾವಿಗೂ ಮುನ್ನ ಆನೆ ಸಾಕಷ್ಟು ನೋವು ಅನುಭವಿಸಿದೆ. 

ಪಾಲಕ್ಕಾಡ್‌ ಜಿಲ್ಲೆಯಲ್ಲಿ ಹಸಿದು ನಾಡಿಗೆ ಬಂದ ಗರ್ಭಿಣಿ ಆನೆ ಪೈನಾಪಲ್ ತಿಂದಿತ್ತು. ಆದ್ರೆ ಇದರಲ್ಲಿ ದುಷ್ಕರ್ಮಿಗಳು ಪಟಾಕಿ ತುಂಬಿಸಿಟ್ಟಿದ್ದರು. ಅದನ್ನ ಅರಿಯದೆ ಆನೆ ಅನನಾಸು ಜಗಿದು ತಿನ್ನಲು ಯತ್ನಿಸಿದಾಗ ಇದು ಸ್ಪೋಟಗೊಂಡು ಆನೆಯ ಬಾಯಿ, ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ನೋವು ಶಮನಗೊಳ್ಳಲು ಆನೆ ನೀರಿನಲ್ಲಿ ಕುಳಿತಿತ್ತು. ಆದ್ರೆ ನೋವು ಹಾಗೂ ಹಸಿವಿನಿಂದ ಆನೆ ನೀರಿನಲ್ಲಿ ಸತ್ತಿತ್ತು. ಆನೆಯ ಮನಕಲುಕುವ ವಿಡಿಯೋ ನೋಡಿ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com