ತೆಲಂಗಾಣ ಬಳಿಕ ತಮಿಳುನಾಡು, ಪುದುಚೇರಿಯಲ್ಲೂ 10ನೇ ತರಗತಿ ಪರೀಕ್ಷೆ ರದ್ದು, ಎಲ್ಲ ವಿದ್ಯಾರ್ಥಿಗಳೂ ಪಾಸ್

ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಇದೇ ನಡೆಯನ್ನು ಅನುಸರಿಸಿರುವ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳೂ ಕೂಡ 10ನೇ ತರಗತಿ ಪರೀಕ್ಷೆ ರದ್ದುಮಾಡಿದ್ದು, ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಇದೇ ನಡೆಯನ್ನು ಅನುಸರಿಸಿರುವ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳೂ ಕೂಡ 10ನೇ ತರಗತಿ ಪರೀಕ್ಷೆ ರದ್ದುಮಾಡಿದ್ದು, ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಿದೆ.

ಈ ಬಗ್ಗೆ ತಮಿಳುನಾಡು ಸಿಎಂ ಇ ಪಳನಿ ಸ್ವಾಮಿ ಮತ್ತು ಪುದುಚೇರಿ ಸಿಎಂ ನಾರಾಯಣಸ್ವಾಮಿ ಅವರು ಘೋಷಣೆ ಹೊರಡಿಸಿದ್ದು, 10 ಮತ್ತು 11ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು 12ನೇ ತರಗತಿ ಪರೀಕ್ಷೆಯ ಕುರಿತು ಮುಂದಿನ ದಿನಗಳನ್ನಿ ನಿರ್ಧಾರ ಕೈಗೊಳ್ಳುವುದಾಗಿ ಉಭಯ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.

ಮಂಗಳವಾರ ಸಚಿವಾಲಯದಲ್ಲಿ ಪ್ರಕಟಣೆ ನೀಡಿದ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಜೂನ್ 15 ರಿಂದ ಪರೀಕ್ಷೆಗಳನ್ನು ಬರೆಯಲು ಕಾಯುತ್ತಿದ್ದ ಈ ಪ್ರಸ್ತಕ ಸಾಲಿನಲ್ಲಿರುವ ಎಲ್ಲಾ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 11 ನೇ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಹೇಳಿದರು. 10 ನೇ ತರಗತಿ ವಿದ್ಯಾರ್ಥಿಗಳಿಗೆ 80% ಅಂಕಗಳು, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಪರೀಕ್ಷೆಗಳಲ್ಲಿ ಅವರ ಸಾಧನೆಯ ಆಧಾರದ ಮೇಲೆ ನೀಡಲಾಗುವುದು ಎಂದಿದ್ದು, ಅವರ ಹಾಜರಾತಿಯನ್ನು ಆಧರಿಸಿ 20% ಅಂಕಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.

ಈಗಾಗಲೇ ತಮಿಳುನಾಡಿನಲ್ಲಿ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅನಂತರ ಮತ್ತೆ ದಿನಾಂಕ ನಿಗಧಿ ಮಾಡಲಾಗಿತ್ತು‌. ಆದರೆ ಸಾರ್ವಜನಿಕರ, ಶಿಕ್ಷಕರ ವಲಯದ ಪಿಟೀಷನ್ ಸ್ವೀಕರಿಸಿದ ಹೈಕೋರ್ಟ್ ಸರ್ಕಾರವನ್ನು ಪರೀಕ್ಷೆಗೇಕೆ ಆತುರ ಎಂದು ಪ್ರಶ್ನೆ ಮಾಡಿತ್ತು. ಸರ್ಕಾರ ಮುಂಬರುವ ದಿನಗಳಲ್ಲಿ ಸೋಂಕು ಹೆಚ್ಚಾಗಬಹುದೆಂಬ ಕಾರಣದಿಂದ ಪರೀಕ್ಷೆ ನಡೆಸಲು ಮುಂದಾಗಿರುವುದಾಗಿ ತಿಳಿಸಿತ್ತು. ಆದರೆ ಈಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಪರೀಕ್ಷೆ ರದ್ದಾಗಿದೆ.

ಅಂತೆಯೇ ಇಂದು ಸುದ್ದಿಗೋಷ್ಠಿ ನಡೆಸಿದ ಪುದುಚೇರಿ ಸಿಎಂ ವಿ ನಾರಾಯಣ ಸ್ವಾಮಿ ಅವರೂ ಕೂಡ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com