ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಹಾಗೂ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು ಶನಿವಾರ 30ನೇ ವರ್ಷಕ್ಕೆ ಕಾಲಿಟಿದ್ದು, ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 6 ದಿನದ ಅಸುಗೂಸಿನ ಚಿಕಿತ್ಸೆಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.
ಈ ಮಗು ನೆರೆಯ ನವಿ ಮುಂಬೈನ ಐರೋಲಿ ಮುನ್ಸಿಪಲ್ ಆಸ್ಪತ್ರೆಯಲ್ಲಿ ಜನಿಸಿದ್ದು, ಹೃದಯ ಬಡಿತದ ತೀವ್ರ ತಗ್ಗುವಿಕೆಯ(ಹಾರ್ಟ್ ಬ್ಲಾಕ್) ಕಾಯಿಲೆಯಿಂದ ಬಳಲುತ್ತಿದೆ. ಹೀಗಾಗಿ ಮಗುವನ್ನು ಮಹಾನಗರದ ಮುಲುಂಡ್ನ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಯುವಸೇನಾ ಪದಾಧಿಕಾರಿಗಳು ತಿಳಿಸಿದ್ದಾರೆ.
ಯುವಸೇನಾ ಕಾರ್ಯಕರ್ತರಾದ ರಾಹುಲ್ ಕನಾಲ್ ಮತ್ತು ಹುಸೇನ್ ಷಾ ಅವರು ಈ ಮಗುವಿನ ಸ್ಶಿತಿ ಬಗ್ಗೆ ತಿಳಿದುಕೊಂಡು ಅದನ್ನು ಯುವ ಸೇನಾ ಮುಖ್ಯಸ್ಥರಾಗಿರುವ ಆದಿತ್ಯ ಠಾಕ್ರೆ ಅವರ ಗಮನಕ್ಕೆ ತಂದರು ಎಂದು ಅವರು ಹೇಳಿದ್ದಾರೆ.
ಠಾಕ್ರೆ ಮಗುವಿನ ತಂದೆ ಅಬ್ದುಲ್ ಅನ್ಸಾರಿ ಅವರಿಗೆ ಒಂದು ಲಕ್ಷ ರೂಪಾಯಿ ಸಹಾಯ ನೀಡಿದ್ದಾರೆ ಮತ್ತು ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
Advertisement